ಹರಿಹರ: ಗ್ರಾಹಕರ ಬೇಕು– ಬೇಡಗಳನ್ನು ಅರಿತು ವಸ್ತುಗಳನ್ನು ಉತ್ಪಾದಿಸಿದರೆ ಕಂಪನಿಗಳು ಯಶಸ್ಸು ಕಾಣಲು ಸಾಧ್ಯ ಎಂದು ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಕಿಯಾಮ್ಸ್) ಅಧ್ಯಕ್ಷ ಅತುಲ್ ಕಿರ್ಲೋಸ್ಕರ್ ಹೇಳಿದರು.
ಕಿಯಾಮ್ಸ್ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಇಂಡಸ್ಟ್ರಿ 4.0 ಲ್ಯಾಬ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಉದ್ಯಮಿ ಸರಿಯಾದ ಮಾಹಿತಿ ಇಲ್ಲದೆ ಉತ್ಪಾದನೆ ಮಾಡಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದರು.
‘ಹಿಂದಿನ ಒಂದು ಶತಮಾನದಲ್ಲಿ ಜಪಾನ್, ಜರ್ಮನಿ, ಚೀನಾ ಹಾಗೂ ಇತರ ಕೆಲವು ದೇಶಗಳು ಉತ್ಪಾದನಾ ಕ್ಷೇತ್ರದಲ್ಲಿ ಅದರಲ್ಲೂ ಯಂತ್ರೋಪಕರಣ ಉತ್ಪಾದನೆಯಲ್ಲಿ ಯಶಸ್ಸು ಸಾಧಿಸಿದವು. ಭಾರತದಲ್ಲಿ ಈಗ ಟಾಟಾ, ಗೋದ್ರೇಜ್, ಕಿರ್ಲೋಸ್ಕರ್ ಗ್ರೂಪ್ ಉದ್ಯಮ ಸಂಸ್ಥೆಗಳು ಗರಿಷ್ಠ ತಂತ್ರಜ್ಞಾನ ಆಧರಿಸಿ ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸಿವೆ. ಭಾರತೀಯ ಕಂಪನಿಗಳು ಮನಸ್ಥಿತಿ ಬದಲಿಸಿಕೊಳ್ಳುವ ಅಗತ್ಯವಿದೆ’ ಎಂದರು.
‘ಲಾಕ್ಡೌನ್ ಅವಧಿಯಲ್ಲಿ ಭಾರತೀಯರು ಡಿಜಿಟಲ್ ವ್ಯವಹಾರದಲ್ಲಿ ದೊಡ್ಡ ಪ್ರಗತಿ ಸಾಧಿಸಿದರು. ಹಣ ವರ್ಗಾವಣೆ, ವರ್ಕ್ ಫ್ರಮ್ ಹೋಂ, ಹೋಂ ಡೆಲಿವರಿ ಸೇರಿ ಮಾರುಕಟ್ಟೆ ವ್ಯವಸ್ಥೆ ಪ್ರಮುಖ ತಿರುವನ್ನು ಪಡೆಯಿತು. ಅಗತ್ಯ ಸಂಶೋಧನೆಗೆ ದಾರಿ ಮಾಡಿ ಕೊಡುತ್ತದೆ ಎನ್ನಲು ಇದು ಸಾಕ್ಷಿ’ ಎಂದರು.
ಲ್ಯಾಬ್ ಉದ್ಘಾಟಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಗಾಯತ್ರಿ ದೇವರಾಜ ಮಾತನಾಡಿ, ‘ಯಾವುದೇ ಕ್ಷೇತ್ರವಾಗಿದ್ದರೂ ನಿರಂತರ ಸಂಶೋಧನೆ ಇದ್ದರೆ ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ. ಮಾತು ಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡಬೇಕಿದೆ’ ಎಂದರು.
‘ಕಿಯಾಮ್ಸ್ ಮಧ್ಯ ಕರ್ನಾಟಕದ ವಿದ್ಯಾರ್ಥಿಗಳಿಗೆ ಅತ್ಯುನ್ನತ ಶಿಕ್ಷಣ, ತರಬೇತಿ ನೀಡುತ್ತಿದೆ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳು ಮಹಾನಗರ
ಗಳಿಗೆ ಹೋಗುವುದನ್ನು ತಪ್ಪಿಸುತ್ತದೆ. ಈ ಸಂಸ್ಥೆಯ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಅಗತ್ಯ ಸಹಕಾರ ನೀಡುತ್ತದೆ’ ಎಂದರು.
ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರಾ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ‘ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆ ಇಂದಿನ ದಿನಮಾನದ ಅಗತ್ಯ. ಈ ಎರಡೂ ಅಂಶಗಳನ್ನು ಅಳವಡಿಸಿಕೊಳ್ಳುವುದು ಎಲ್ಲಾ ಉದ್ಯಮ, ಶಿಕ್ಷಣ ಸಂಸ್ಥೆಗಳಿಗೆ ಅನಿವಾರ್ಯವಾಗಿದೆ’ ಎಂದರು.
ಹರಿಹರ ಪಾಲಿಫೈಬರ್ಸ್ ಕಾರ್ಖಾನೆ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಸಂದೀಪ್ ಭಟ್, ಜೆಎಸ್ಡಬ್ಲ್ಯು ಕಾರ್ಖಾನೆಯ ಎಲ್.ಕೆ.ರೆಡ್ಡಿ, ನಿವೃತ್ತ ಪ್ರಾಚಾರ್ಯ ಪ್ರೊ.ವೃಷಭೇಂದ್ರಪ್ಪ, ಕಿಯಾಮ್ಸ್ ಸಂಸ್ಥೆ ನಿರ್ದೇಶಕರಾದ ಡಾ.ಬಿಸ್ವಾಸ್, ಡಾ.ನಾಗರಾಜ್, ಸೂರಜ್ ಪಾಟೀಲ್, ಡಾ.ಆರ್ಥರ್ ಫರ್ನಾಂಡಿಸ್, ಕೆ.ಟಿ.ನಾಗರಾಜ್, ರಾಘವೇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.