ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಕಾರ್ಮಿಕರ ದಿನ: ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಅವಶ್ಯ -ಆನಂದರಾಜ್‌

ಎಐಟಿಯುಸಿ ಸಂಘಟನೆಯ ಹಿರಿಯ ಕಾರ್ಮಿಕ ಮುಖಂಡ ಆನಂದರಾಜ್‌ ಪ್ರತಿಪಾದನೆ
Last Updated 1 ಮೇ 2021, 5:12 IST
ಅಕ್ಷರ ಗಾತ್ರ

1886ರ ಮೇ 1ರಂದು ಶಿಕಾಗೊ ನಗರದ ಹೇ ಮಾರ್ಕೆಟ್‌ ಸ್ಕ್ವೇರ್‌ನಲ್ಲಿ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ದುಡಿಮೆಯ ಅವಧಿಯನ್ನು 8 ಗಂಟೆಗಳಿಗೆ ನಿಗದಿಗೊಳಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಕೈಗೊಂಡಿದ್ದರು. ಮುಷ್ಕರ ತೀವ್ರಗೊಂಡಾಗ ಪೊಲೀಸರು ಕಾರ್ಮಿಕರ ಮೇಲೆ ಗುಂಡಿನಮಳೆ ಗೈದರು. ಹಲವು ಕಾರ್ಮಿಕರು ಮೃತಪಟ್ಟರು. ಇದರಿಂದ ಧೃತಿಗೆಡದ ಕಾರ್ಮಿಕರು ಹೋರಾಟವನ್ನು ಮುಂದುವರಿಸಿ ಯಶಸ್ಸನ್ನೂ ಸಾಧಿಸಿದರು. ಈ ಘಟನೆ ಸ್ಮರಣಾರ್ಥ 1889ರಿಂದ ಮೇ ದಿನವನ್ನು ಆಚರಿಸಲಾಗುತ್ತಿದೆ. ಇಂದು ವಿಶ್ವ ಕಾರ್ಮಿಕರ ದಿನ.

ದಾವಣಗೆರೆ: 1960ರ ದಶಕದಲ್ಲಿ ದಾವಣಗೆರೆಯಲ್ಲಿನ ಹತ್ತಿಗಿರಣಿಗಳು ಮತ್ತು ಅದರೊಂದಿಗೆ ಬೆಳೆದ ಕಾರ್ಮಿಕ ಹೋರಾಟದ ಕಥೆ ರೋಚಕವಾದುದು. ಆ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಶೇಖರಪ್ಪ, ಸುರೇಶ್‌ ಹತ್ಯೆಗೀಡಾದರು. 1990ರ ನಂತರದಲ್ಲಿ ಹತ್ತಿಗಿರಣಿಗಳ ವೈಭವ ಮತ್ತು ಹೋರಾಟದ ಕಾವು ಎರಡೂ ಇಳಿದು ಹೋಯಿತು. ಈ ಎಲ್ಲವನ್ನೂ ಕಣ್ಣಾರೆ ಕಂಡಿರುವ ಸ್ವತಃ ಕಾರ್ಮಿಕರೂ ಆಗಿದ್ದ ಎಐಟಿಯುಸಿ ಹಿರಿಯ ಕಾರ್ಮಿಕ ಮುಖಂಡ ಆನಂದರಾಜ್‌ ಅವರ ಸಂದರ್ಶನ ಇಲ್ಲಿದೆ.

* ಅಂದು ಕಾರ್ಖಾನೆಗಳಲ್ಲಿನ ಕಾರ್ಮಿಕರ ಸ್ಥಿತಿ ಹೇಗಿತ್ತು?

ದಾವಣಗೆರೆಯಲ್ಲಿ ಅಂದು ಎಂಟು ಹತ್ತಿ ಗಿರಣಿಗಳಿದ್ದವು. ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ದಿನಕ್ಕೆ 1 ರೂಪಾಯಿ ಸಂಬಳ. 8 ಗಂಟೆಗಳಿಗೂ ಮೀರಿ ಕೆಲಸ. ನಿಗದಿತ ಸಮಯಕ್ಕಿಂತ ಒಂದು ನಿಮಿಷ ತಡವಾದರೂ ವಾಪಸ್‌ ಕಳುಹಿಸುತ್ತಿದ್ದರು. ಆದರೆ, ಹೊರ ಬರುವುದಕ್ಕೆ ಸಮಯವಿರಲಿಲ್ಲ. ವಿಮೆ, ಭವಿಷ್ಯನಿಧಿ, ಬೋನಸ್‌ ದೂರದ ಮಾತಾಗಿತ್ತು. ಮಧ್ಯಾಹ್ನದ ಊಟ ಮಾಡಲು, ಶೌಚಾಲಯಕ್ಕೆ ಹೋಗಲೂ ಸಮಯ ಸಿಗುತ್ತಿರಲಿಲ್ಲ. ಕೆಲಸದ ಜಾಗದಲ್ಲಿಯೇ ಮಲ, ಮೂತ್ರ ಮಾಡಿಕೊಂಡ ಉದಾಹರಣೆಗಳಿವೆ. ಮಹಿಳಾ ಕಾರ್ಮಿಕರ ಮೇಲಿನ ದೌರ್ಜನ್ಯ ಹೇಳತೀರದಾಗಿತ್ತು.

* ಹೋರಾಟ ಆರಂಭವಾದ ಕುರಿತು ಹೇಳಿ?

ಆಗ ನಾನಿನ್ನೂ 12 ವರ್ಷದ ಹುಡುಗ. ಐಎನ್‌ಟಿಯುಸಿ ಎಂಬ ಸಂಘಟನೆ ಇತ್ತು. ಆದರೆ, ಕಾರ್ಮಿಕರ ಪರವಾಗಿ ಇರಲಿಲ್ಲ. ಆದಕಾರಣ ಅದನ್ನು ಮಾಲೀಕರ ಸಂಘ ಎಂದು ಕರೆಯುತ್ತಿದ್ದೆವು. ಆಗ ಭಾರತ ಕಮ್ಯುನಿಸ್ಟ್ ಪಕ್ಷವು (ಸಿಪಿಐ) ಕಾರ್ಮಿಕರನ್ನು ಸಂಘಟಿಸಿತು. ಎಐಟಿಯುಸಿ (ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌) ಅಡಿ 1962ರಲ್ಲಿ ದಾವಣಗೆರೆ ಕಾಟನ್‌ ಮಿಲ್‌ ಎಂಪ್ಲಾಯೀಸ್‌ ಅಸೋಸಿಯೇಷನ್‌ ಆರಂಭವಾಯಿತು. ಶೇಖರಪ್ಪ, ಸುರೇಶ್‌, ಪಂಪಾಪತಿ, ಆನಗೋಡು ರಾಮಚಂದ್ರಪ್ಪ, ನೀಲಪ್ಪ ಅವರ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿತು. ಮಾಲೀಕರ ಪರವಾದ ಗೂಂಡಾಗಳು ಮತ್ತು ಕಾರ್ಮಿಕರ ನಡುವೆ ತಿಕ್ಕಾಟಗಳು ನಡೆಯುತ್ತಲೇ ಇದ್ದವು. ಸಂಘಟನೆ ಜತೆ ಗುರುತಿಸಿಕೊಂಡವರನ್ನು ಮರುದಿನ ಕೆಲಸಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.

ಎಂಟು ಗಂಟೆಗಳ ದುಡಿಮೆಯ ಅವಧಿ, ಸಂಬಳ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹತ್ತಿ ಗಿರಣಿಗಳ ಕಾರ್ಮಿಕರ ಸಮ್ಮೇಳನವನ್ನು ಪ್ರಥಮ ಸಮ್ಮೇಳನವನ್ನು ಆಯೋಜಿಸುವ ಬಗ್ಗೆ ಚರ್ಚಿಸಲು 1970ರ ಏಪ್ರಿಲ್‌ 1ರಂದು ಪಿ.ಬಿ. ರಸ್ತೆಯಲ್ಲಿದ್ದ ಸಂಘದ ಕಚೇರಿಯಲ್ಲಿ ಸಭೆ ಸೇರಿದ್ದೆವು. ಮಾಲೀಕರ ಕಡೆಯ ಗೂಂಡಾಗಳು ಸಭೆಯ ಮೇಲೆ ದಾಳಿ ನಡೆಸಿದರು. ಶೇಖರಪ್ಪ, ಸುರೇಶ್‌ ಹತ್ಯೆಗೀಡಾದರು. 40ಕ್ಕೂ ಹೆಚ್ಚು ಜನರು ಗಾಯಗೊಂಡರು. ನನ್ನ ತಲೆಗೂ ಗಂಭೀರವಾದ ಏಟು ಬಿದ್ದಿತ್ತು. ಪಂಪಾಪತಿ ಅವರೂ ಹೇಗೋ ಬದುಕುಳಿದರು. ಇದರಿಂದ ಕಾರ್ಮಿಕರು ಮತ್ತಷ್ಟು ರೊಚ್ಚಿಗೆದ್ದರು. ಸಮ್ಮೇಳನವನ್ನೂ ಯಶಸ್ವಿಗೊಳಿಸಿದೆವು. ಸತತ ಹೋರಾಟದ ಫಲವಾಗಿ ಬೇಡಿಕೆಗಳೂ ಈಡೇರಿದವು. ಆದರೆ, 1990ರ ದಶಕದಲ್ಲಿ ಜಾಗತೀಕರಣ ಸಂಬಂಧಿ ಗ್ಯಾಟ್‌ ಒಪ್ಪಂದದ ಪರಿಣಾಮ ಗಿರಣಿಗಳು ಬಂದ್‌ ಆದವು.

* ಕಾರ್ಖಾನೆಗಳು ಬಂದ್‌ ಆದಾಗ ಏನಾಯಿತು?

ಕಾರ್ಖಾನೆಗಳು ಬಂದ್‌ ಆಗಿದ್ದರಿಂದ ದಿಕ್ಕು ತೋಚದ ಬಹುತೇಕ ಕಾರ್ಮಿಕರು ಊರು ತೊರೆದರು. ಒಂದಷ್ಟು ಮಂದಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕಿದರು. ಮತ್ತೊಂದಷ್ಟು ಮಂದಿ ಸೆಕ್ಯೂರಿಟಿ ಗಾರ್ಡ್‌ಗಳಾದರು. ದಾವಣಗೆರೆ ಕಾಟನ್‌ ಮಿಲ್‌, ಗಣೇಶ ಮಿಲ್‌ ಇಂದು ಲೇಔಟ್‌ಗಳಾಗಿವೆ. ಚಿಗಟೇರಿ ಮಿಲ್‌ ಜಾಗದಲ್ಲಿ ಬಾಪೂಜಿ ಸ್ಕೂಲ್‌ ಆಫ್‌ ನರ್ಸಿಂಗ್‌, ಚಂದ್ರೋದಯ ಮಿಲ್‌ ಜಾಗದಲ್ಲಿ ಚೈತನ್ಯ ಟೆಕ್ನೊ ಸ್ಕೂಲ್‌ ನಿರ್ಮಾಣವಾಗಿದೆ. ಸಿದ್ದೇಶ್ವರ ಮಿಲ್‌ ಒಡೆದು ಹಾಕಲಾಗಿದೆ. ಪ್ರಸ್ತುತ ಆಂಜನೇಯ ಕಾಟನ್‌ ಮಿಲ್‌ ಮಾತ್ರವೇ ಕಾರ್ಯ ನಿರ್ವಹಿಸುತ್ತಿದೆ.

* ಈಗ ಕಾರ್ಮಿಕರ ಮುಂದಿರುವ ಸವಾಲುಗಳೇನು?

ಖಾಸಗೀಕರಣದ ಭಾಗವಾಗಿ ಇಂದು ಬಹುತೇಕ ಕ್ಷೇತ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಶೋಷಣೆಯ ಸ್ವರೂಪ ಬದಲಾಗಿದಯೇ ಹೊರತು ಸೌಲಭ್ಯಗಳು ಪೂರ್ಣವಾಗಿ ಸಿಕ್ಕಿಲ್ಲ. ಗುತ್ತಿಗೆದಾರರು ವೇತನದ ಬಗ್ಗೆ ಹೇಳುವುದೊಂದು ಕೊಡುವುದೊಂದು. ಈ ಬಗ್ಗೆ ಪ್ರಶ್ನಿಸಿದರೆ ಸರ್ಕಾರವು ಗುತ್ತಿಗೆದಾರರೆಡೆ, ಗುತ್ತಿಗೆದಾರರು ಸರ್ಕಾರದೆಡೆ ಬೊಟ್ಟು ತೋರಿಸುತ್ತಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ. ಪ್ರಸ್ತುತ ಕೋವಿಡ್‌ ಸಂದರ್ಭದಲ್ಲಿ ಬದುಕು ಹೈರಾಣಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟವೊಂದೇ ಪರಿಹಾರ ಮಾರ್ಗವಾಗಿದೆ.

***

ನಗರದಲ್ಲಿ ಕಮ್ಯುನಿಸ್ಟ್‌ ಆಡಳಿತದ ಅವಧಿಯಲ್ಲಿ ಸಾವಿರಾರು ಬಡವರಿಗೆ ನಿವೇಶನ ಕಲ್ಪಿಸುವ ಕೆಲಸ ಮಾಡಲಾಗಿದೆ. ಆದರೆ, ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವಾಗಬೇಕಿದೆ. ಅಸಂಘಟಿತ ಕಾರ್ಮಿಕರು ಮತ್ತು ಕೊಳೆಗೇರಿಗಳ ಜನರಿಗೆ ಹಕ್ಕುಗಳನ್ನು ದೊರಕಿಸುವ ಹೋರಾಟ ಮುನ್ನಡೆದಿದೆ.
ಎಚ್‌.ಕೆ. ರಾಮಚಂದ್ರಪ್ಪ, ಜಿಲ್ಲಾ ಅಧ್ಯಕ್ಷ, ಎಐಟಿಯುಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT