ದಾವಣಗೆರೆ: ತಿಂಗಳಿಗೆ ₹12 ಸಾವಿರ ನಿಗದಿ ಮಾಡಬೇಕು ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್ಗಳನ್ನು ನೀಡಬೇಕು ಎಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಬುಧವಾರ ನಗರದ ಮುಖ್ಯ ಅಂಚೆ ಕಚೇರಿ ಬಳಿ ಪತ್ರ ಚಳವಳಿ ನಡೆಸಿದರು.
ಧರಣಿ 6ನೇ ದಿನವೂ ಮುಂದುವರೆದಿದ್ದು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಂಚೆ ಪತ್ರಗಳಲ್ಲಿ ತಮ್ಮ ಬೇಡಿಕೆಗಳ ಪಟ್ಟಿ ಮಾಡಿ ಮುಖ್ಯಮಂತ್ರಿಗೆ ರವಾನಿಸಿದರು.
‘ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಬಾಣಂತಿ ಮತ್ತು ಮಕ್ಕಳ ಆರೈಕೆಯಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ. ಆಶಾಗಳ ಸೇವೆಯಿಂದಾಗಿ ತಾಯಿ ಮತ್ತು ಶಿಶುಮರಣ ಸಂಖ್ಯೆಯು ಕಡಿಮೆಯಾಗಿದೆ. ನಾಲ್ಕು ತಿಂಗಳಿಂದ ಕೋವಿಡ್-19ರ ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅವರಿಗೆ ಗೌರವಯುತ ಜೀವನ ನಡೆಸಲು ಬೇಕಾದ ಕನಿಷ್ಠ ಸಂಭಾವನೆ ನೀಡುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಜೀವನಕ್ಕೆ ಯೋಗ್ಯ ವೇತನ, ಗೌರವಧನ ನೀಡದೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ಎಂದು ಹೊಗಳಿ, ಹೂಮಳೆ ಸುರಿಸಿ, ಶಾಲು ಹಾಕಿ ಸನ್ಮಾನಿಸಿ ಪುಕ್ಕಟೆಯಾಗಿ ಹಗಲು ರಾತ್ರಿ ಗಾಣದೆತ್ತಿನಂತೆ ದುಡಿಸಿಕೊಳ್ಳುತ್ತಿರುವುದು ಖಂಡನೀಯ’ ಎಂದರು.
‘16 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಗುರುವಾರ ಆಶಾ ಕಾರ್ಯಕರ್ತೆಯರು ಕುಟುಂಬದ ಸದಸ್ಯರ ಜೊತೆಯಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.