ದಾವಣಗೆರೆ: ‘ಪತ್ನಿ ಗೀತಾ ಶಿವಮೊಗ್ಗದಲ್ಲೇ ಹುಟ್ಟಿದವರು. ಯಾವಾಗಲೂ ಶಿವಮೊಗ್ಗಕ್ಕೆ ಹೋಗಿ ಬರುತ್ತಿರುತ್ತಾರೆ. ಅವರಿಗೆ ಅಲ್ಲಿನ ಸಮಸ್ಯೆ ಬಗ್ಗೆ ಗೊತ್ತಿದೆ. ಈ ಬಾರಿ ಮತದಾರರು ಲೋಕಸಭೆ ಚುನಾವಣೆಯಲ್ಲಿ ಅವರನ್ನು ಆಶೀರ್ವದಿಸಲಿದ್ದಾರೆ’ ಎಂದು ನಟ ಶಿವರಾಜಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಅಭಿನಯದ ‘ಕರಟಕ ದಮನಕ’ ಚಿತ್ರದ ವಿಜಯಯಾತ್ರೆಯಲ್ಲಿ ಪಾಲ್ಗೊಳ್ಳಲು ಸೋಮವಾರ ನಗರಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಗೀತಾ ಅವರು ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಬಿಜೆಪಿ ಭದ್ರಕೋಟೆ ಎಂದು ಹೇಳುತ್ತಾರೆ. ಆದರೆ ಈಗ ಅದೆಲ್ಲ ಇಲ್ಲ. ಭದ್ರಕೋಟೆಗಳೂ ಬದಲಾಗುತ್ತವೆ’ ಎಂದರು.