ಹರಪನಹಳ್ಳಿ: ಮಕ್ಕಳು ಆದರ್ಶ ಪ್ರಜೆಗಳಾಗಿ ಹೊರಹೊಮ್ಮಲು ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ, ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಹರಿಹರ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಲಹೆ ನೀಡಿದರು.
ತಾಲ್ಲೂಕಿನ ಕಡತಿ ಗ್ರಾಮದ ದೇವಸ್ಥಾನದಲ್ಲಿ ಗ್ರಾಮದರ್ಶನ ಕಾರ್ಯಕ್ರಮದಲ್ಲಿ ಭಾನುವಾರ ಹರಜಾತ್ರೆಗೆ ಆಹ್ವಾನ ನೀಡಿ ಅವರು ಮಾತನಾಡಿದರು.
ಚಿಕ್ಕ ಮಕ್ಕಳೇ ಪೋಲಿಯೊ, ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜ್ಞಾನದ ಕೊರತೆಯಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ನೀರು ಲಭ್ಯವಾಗುವಂತೆ ಈಗಿನಿಂದಲೇ ಕಾಳಜಿವಹಿಸಬೇಕು ಎಂದರು.
ಜ.14 ರಿಂದ ಜ.15ರ ವರೆಗೆ ಎರಡು ದಿನ ನಡೆಯುವ ಹರಜಾತ್ರೆ ಹರಿಹರ ಪೀಠದ ಆವರಣದಲ್ಲಿ ನಡೆಯಲಿದೆ. ಸ್ವಾವಲಂಬಿ ಭಾರತ, ಕೃಷಿ, ಯುವಜನ, ಮಹಿಳೆಯರ ಕುರಿತಾಗಿ ನಡೆಯುವ ಸಮಾವೇಶದಲ್ಲಿ ಗಣ್ಯರು, ಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಜಾತ್ರೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಆಹ್ವಾನ ನೀಡಿದರು.
ದುಗ್ಗಾವತಿ, ತಾವರಗುಂದಿ, ನಿಟ್ಟೂರು, ಹಲುವಾಗಲು, ಅರಸನಾಳು, ಐ.ಬೇವಿನಹಳ್ಳಿ, ಹಾರಕನಾಳು, ಗೌರಿಹಳ್ಳಿ, ನೀಲಗುಂದ ಗ್ರಾಮಗಳಿಗೆ ತೆರಳಿ ಹರಜಾತ್ರೆಗೆ ಭಕ್ತರನ್ನು ಆಹ್ವಾನಿಸಿದರು. ಕಡತಿ ಗ್ರಾಮದ ಅರಣ್ಯ ಸೇವಾ ಸಮಿತಿ ಕಾರ್ಯಕರ್ತರು ಸ್ವಾಮೀಜಿಗೆ ಸಸಿಗಳನ್ನು ನೀಡಿ ಸನ್ಮಾನಿಸಿದರು.