ಮಲೇಬೆನ್ನೂರು: ಸಮೀಪದ ವಾಸನ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಕೊರೊನಾ ಶಂಕಿತ 13 ಜನರನ್ನು ಕ್ವಾರಂಟೈನ್ ಮಾಡುವುದನ್ನು ವಿರೋಧಿಸಿ ನಾಗರಿಕರು ಗುರುವಾರ ರಸ್ತೆ ತಡೆ ನಡೆಸಿದರು.
ನಿಪ್ಪಾಣಿ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹರಿಹರ ತಾಲ್ಲೂಕಿನ ವಿವಿಧ ಗ್ರಾಮದವರು ಎನ್ನಲಾದ ಕಾರ್ಮಿಕರನ್ನು ಶಾಲೆಯಲ್ಲಿ ಹೋಂ ಕ್ವಾರಂಟೈನ್ ಮಾಡುವ ವಿಷಯ ತಿಳಿದ ಗ್ರಾಮಸ್ಥರು ಗುಂಪುಗೂಡಿ ವಿರೋಧ ವ್ಯಕ್ತಪಡಿಸಿದರು.
ಕೆಲಸದ ಸ್ಥಳದಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದಿದ್ದ 13 ಜನರನ್ನು ಕರೆತಂದ ವಾಹನ ಬಂದಾಗ, ಸ್ವಲ್ಪ ದೂರದಲ್ಲಿ ನಿಲ್ಲಿಸಿ, ರಸ್ತೆ ತಡೆ ಆರಂಭಿಸಿ ‘ಬೇಡ, ಬೇಡ ಕ್ವಾರಂಟೈನ್ ಕೇಂದ್ರ ಬೇಡ’ ಎಂದು ಘೋಷಣೆ ಕೂಗಿದರು.
‘ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ಕೇಂದ್ರ ಮಾಡುವುದರಿಂದ, ಕೊರೊನಾ ವೈರಸ್ ಹರಡುತ್ತದೆ. ಹಾಗಾಗಿ, ಕ್ವಾರಂಟೈನ್ ಕೇಂದ್ರ ತೆರೆಯ ಬೇಡಿ’ ಎಂದು ಒತ್ತಾಯಿಸಿದ ಧರಣಿ ನಿರತರು ಸರ್ಕಾರಿ ಸಿಬ್ಬಂದಿ, ಪೊಲೀಸರೊಡನೆ ವಾಗ್ವಾದ ನಡೆಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಾಸನದ ಓಂಕಾರಪ್ಪ, ‘ಹೊಸದಾಗಿ ತಾಲ್ಲೂಕಿಗೆ ಕೊರೊನಾ ವೈರಸ್ ತರಬೇಡಿ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಹಿಳಾ ವಿಭಾಗದ ಮಂಜುಳಮ್ಮ, ಮುಖಂಡರಾದ ರಮೇಶ್, ಬಸವರಾಜ್ , ವೆಂಕಟೇಶ್, ಕೆಂಚವೀರಯ್ಯ, ದೇವರಾಜ್ ಸರ್ಕಾರಿ ಅಧಿಕಾರಿಗಳ ವರ್ತನೆ ಖಂಡಿಸಿದರು.
ಅಧಿಕಾರಿವೃಂದ ಧರಣಿ ನಿರತರ ಮನವೊಲಿಸಲು ನಡೆಸಿದ ಯತ್ನ ವಿಫಲವಾಯಿತು. ಸಂಜೆ ಹೊತ್ತಿಗೆ 13 ಕಾರ್ಮಿಕರನ್ನು ಪೊಲೀಸ್ ರಕ್ಷಣೆಯಲ್ಲಿ ಶಾಲೆಯೊಳಗೆ ಕರೆದೊಯ್ದಲಾಯಿತು. ಕೊರೊನಾ ಭೀತಿಯಿಂದ ಯಾರೊಬ್ಬರೂ ಹತ್ತಿರಕ್ಕೆ ಸುಳಿಯಲಿಲ್ಲ. ಶಾಲೆ ಗೇಟಿಗೆ ಬೀಗಹಾಕಿ ಪೊಲೀಸ್ ಭದ್ರತೆ ಒದಗಿಸಿದರು. ಕಾರ್ಮಿಕರ ಆರೋಗ್ಯ ತಪಾಸಣೆ, ಗೇಟಿನ ಬಳಿ ಗ್ರಾಮಸ್ಥರ ವಾಗ್ವಾದ, ಪ್ರತಿಭಟನೆ ಮುಂದುವರೆದಿತ್ತು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ್ ಗಂಗಲ್, ಸಿಪಿಐ ಶಿವಪ್ರಸಾದ್, ಪಿಎಸ್ಐ ಕಿರಣ್ ಕುಮಾರ್, ಟಿಎಚ್ಓ ಚಂದ್ರಮೋಹನ್, ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮೀಪತಿ, ಪಿಡಿಒ ಸುನೀಲ್ ಕುಮಾರ್, ವೀರಪ್ಪ, ಸಿಬ್ಬಂದಿ ಇದ್ದರು.