ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ರಂಗನಾಥಾಶ್ರಮದ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ 71ನೇ ಆರಾಧನಾ ಮಹೋತ್ಸವ ಮಂಗಳವಾರ ವಿಧ್ಯುಕ್ತವಾಗಿ ಆರಂಭವಾಯಿತು.
ಮೊದಲ ದಿನ ಗಣಹೋಮ ಶಿವಮೊಗ್ಗದ ಆಗಮಿಕ ಶಂಕರಾನಂದ ಜೋಯ್ಸ್, ಮಲ್ಲಾರಿ ಜೋಯ್ಸ್, ವಿಜಯಕುಮಾರ್ ಜೋಯ್ಸ್, ವಿನಯ್, ಎಂ.ಪಿ.ನಟರಾಜನ್ ನೇತೃತ್ವದಲ್ಲಿ ‘ಸಹಸ್ರ ಮೋದಕ ಗಣಹೋಮ’, ‘ಗಣಪತಿ ಅಥರ್ವ ಶೀರ್ಷ’ ಮಂತ್ರ ಪಠಣ ರುದ್ರಾಭಿಷೇಕ ಮಾಡಿ ಪೂರ್ಣಾಹುತಿ ಸಮರ್ಪಣೆ ಮಾಡಿದರು.
ಗುರುಚರಿತ್ರೆ ಪಾರಾಯಣ, ದುರ್ಗಾ ಸಪ್ತಶತಿ ಪಾರಾಯಣ, ಭಗವದ್ಗೀತೆ, ಸುಂದರಕಾಂಡ ಪಠಣ, ಮಹಾಭಾರತ, ರಾಮಾಯಣ ವಾಚನ, ಭಜನೆ, ಅಷ್ಠಾವಧಾನದ ಕಾರ್ಯಕ್ರಮಗಳು ನಡೆದವು. ಭಕ್ತರು ಸಾಮೂಹಿಕವಾಗಿ ಗುರುಭಜನೆ ಪಠಿಸಿದರು.
ಆಶ್ರಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಸಮಾಧಿ ಸ್ಥಳಕ್ಕೆ ವಿಶೇಷ ಪೂಜೆ ಮಾಡಲಾಗಿತ್ತು. ಟ್ರಸ್ಟ್ ಪದಾಧಿಕಾರಿಗಳು, ತಡಗಣಿಯ ಅವಧೂತ ರವೀಂದ್ರನಾಥ್ ಇದ್ದರು.
ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಒಂದು ವಾರ ಆರಾಧನಾ ಮಹೋತ್ಸವ ನಡೆಯಲಿದೆ.