ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಓಟ ನಿಲ್ಲಿಸಲು ಕಾಂಗ್ರೆಸ್‌ ಯತ್ನ

ಸಾ.ರಾ.ಮಹೇಶ್‌–ರವಿಶಂಕರ್‌ ನಡುವೆ ನೇರ ಹಣಾಹಣಿ; ಮಹಿಳೆಗೆ ಒಲಿಯುವುದೇ ಅದೃಷ್ಟ?
Last Updated 9 ಮೇ 2018, 11:10 IST
ಅಕ್ಷರ ಗಾತ್ರ

ಮೈಸೂರು:‌ ‘ಇಷ್ಟು ದಿನ ಬಾಯಿ ಬಡಿದುಕೊಂಡರೂ ನಮ್ಮ ಆ ಕೂಗು ಯಾರ ಕಿವಿಗೂ ಬಿದ್ದಿರಲಿಲ್ಲ. ಯಾರೊಬ್ಬರೂ ನಾವಿದ್ದೇವೆ ಎಂಬ ಭರವಸೆ ನೀಡಲಿಲ್ಲ. ಈಗ ಮತ ಕೊಡಿ ಎಂದು ಮನೆ ಬಾಗಿಲಿಗೆ ಬಂದಿದ್ದಾರೆ. ಏನು ಮಾಡಬೇಕು ಎಂಬುದು ನಮಗೂ ಗೊತ್ತಿದೆ’

–ಕೆ.ಆರ್‌.ನಗರ ಕ್ಷೇತ್ರದ ಕಾರ್ಮಿಕರು ಹಲವು ದಿನಗಳಿಂದ ಅದುಮಿಟ್ಟುಕೊಂಡಿರುವ ಹತಾಶೆಯ ನುಡಿಗಳಿವು. ಇಷ್ಟು ದಿನ ಕಾಯುತ್ತಿದ್ದ ಅವರು ಮೇ 12ರಂದು ಉತ್ತರ ನೀಡಲು ಸಜ್ಜಾಗಿದ್ದಾರೆ.

ಇದಕ್ಕೆ ಕಾರಣ ರೈತರ ಜೀವನಾಡಿ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಗೆ ಇಷ್ಟು ದಿನಗಳಾದರೂ ಪುನರಾರಂಭ ಭಾಗ್ಯ ಲಭಿಸದಿರುವುದು. ಕ್ಷೇತ್ರದಲ್ಲಿ ಇವತ್ತಿಗೂ ಬಗೆಹರಿಯದೆ ಉಳಿದುಕೊಂಡಿರುವ ಅತಿ ದೊಡ್ಡ ಸಮಸ್ಯೆ ಇದು.

ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಕಾರ್ಖಾನೆ ವಿಷಯವನ್ನು ಇಟ್ಟುಕೊಂಡು ‘ಕ್ಷೇತ್ರಕ್ಕೆ ಏನು ಮಾಡಿದ್ದೀರಿ’ ಎಂದು ಜನರು ಪ್ರಶ್ನಿಸುತ್ತಿರುವುದು ಶಾಸಕ, ಜೆಡಿಎಸ್‌ ಅಭ್ಯರ್ಥಿ ಸಾ.ರಾ.ಮಹೇಶ್‌ ಅವರಿಗೆ ತುಸು ತಲೆ ನೋವು ತಂದಿರುವುದು ಸುಳ್ಳಲ್ಲ. ಜೊತೆಗೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ರವಿಕುಮಾರ್‌ ಅವರಿಗೂ ಕಾರ್ಖಾನೆ ವಿಷಯ ಅಡ್ಡಗಾಲಾಗಿ ಪರಿಣಮಿಸಿದೆ. ಏಕೆಂದರೆ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್‌ ಸರ್ಕಾರ ಪ್ರಯತ್ನಿಸಲಿಲ್ಲ ಎಂಬ ಸಿಟ್ಟು ಜನರಿಗಿದೆ. ಯುವಕರು ಉದ್ಯೋಗಕ್ಕಾಗಿ ದೊಡ್ಡ ನಗರ ಮತ್ತು ಪಟ್ಟಣಗಳಿಗೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ. ಇದರ ಲಾಭ ಪಡೆಯಲು ಉಳಿದಿರುವುದು ಒಬ್ಬರೇ. ಅದು ಬಿಜೆಪಿ ಅಭ್ಯರ್ಥಿ ಶ್ವೇತಾ ಗೋಪಾಲ್‌. ಆದರೆ, ಕ್ಷೇತ್ರದಲ್ಲಿ ಈ ಪಕ್ಷ ಇದುವರೆಗೆ ಎರಡನೇ ಸ್ಥಾನವನ್ನೂ ಪಡೆದಿಲ್ಲ.

‌ಕ್ಷೇತ್ರದಲ್ಲಿ ಸಾ.ರಾ.ಮಹೇಶ್‌ ಹಾಗೂ ರವಿಕುಮಾರ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಎರಡೂ ಪಕ್ಷಗಳ ನಡುವೆ 40 ವರ್ಷಗಳಿಂದ ಜಿದ್ದಾಜಿದ್ದಿನ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕ್ಷೇತ್ರದಲ್ಲಿ ಕುರುಬರು, ಒಕ್ಕಲಿಗರದ್ದೇ ಪ್ರಾಬಲ್ಯ. ಸಾ.ರಾ.ಮಹೇಶ್‌ ಒಕ್ಕಲಿಗರಾದರೆ, ಡಿ.ರವಿಶಂಕರ್‌ ಕುರುಬರು. ಕೆಲ ಕ್ಷೇತ್ರಗಳಲ್ಲಿ ಕೇಳಿ ಬರುತ್ತಿರುವಂತೆ ಇಲ್ಲೂ ಈ ಬಾರಿ ಜೆಡಿಎಸ್‌– ಬಿಜೆಪಿ ಒಳ ಒಪ್ಪಂದದ ಗುಸುಗುಸು ಇದೆ. ಕ್ಷೇತ್ರದಲ್ಲಿ ಬಿಜೆಪಿಗೆ ಕಡಿಮೆ ಮತ ಬಿದ್ದಷ್ಟು ಜೆಡಿಎಸ್‌ಗೆ ನೆರವಾಗುತ್ತದೆ ಎಂಬ ಲೆಕ್ಕಾಚಾರವಿದೆ. ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದ ಹೊಸಹಳ್ಳಿ ವೆಂಕಟೇಶ್‌ಗೆ ಬಿಜೆಪಿ ಟಿಕೆಟ್‌ ತಪ್ಪಲು ಇದೇ ಅಂಶ ಕಾರಣ ಎನ್ನಲಾಗುತ್ತಿದೆ.

ಗಟ್ಟಿಯಾಗಿರುವ ಜೆಡಿಎಸ್‌ ನೆಲೆ: ಹ್ಯಾಟ್ರಿಕ್‌ ಗೆಲುವಿನ ಮೇಲೆ ಮಹೇಶ್‌ ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ನೆಲೆ ಗಟ್ಟಿಯಾಗಿಯೇ ಇದೆ. ಅದಕ್ಕೆ ಅಕ್ಕಪಕ್ಕದ ಮಂಡ್ಯ, ಹಾಸನ ಜಿಲ್ಲೆಗಳ ಪ್ರಭಾವವೂ ಸೇರಿಕೊಂಡಿದೆ. ಇದು ಅವರ ಗೆಲುವಿಗೆ ವರದಾನ ವಾಗಬಹುದು.

ಉದ್ಯೋಗ ಹೆಚ್ಚಿಸಲು ತಾಲ್ಲೂಕಿಗೆ 5 ಕಾರ್ಖಾನೆ ತರುವ ಭರವಸೆಯನ್ನೂ ನೀಡುತ್ತಿದ್ದಾರೆ. ಕ್ಷೇತ್ರದಲ್ಲೇ ಹೆಚ್ಚು ಓಡಾಡುತ್ತಿರುತ್ತಾರೆ, ಸುಲಭವಾಗಿ ಕೈಗೆ ಸಿಗುತ್ತಾರೆ ಎಂಬ ವಿಚಾರಗಳು ಮೂರನೇ ಗೆಲುವು ದೊರಕಿಸಿಕೊಟ್ಟರೂ ಅಚ್ಚರಿ ಇಲ್ಲ. ಆದರೆ, ಕ್ಷೇತ್ರದ ಜನ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಆಕ್ರೋಶವೇ ಮುಳುವಾಗಲೂಬಹುದು. ಈಚೆಗೆ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವಂತೆ ಭವಾನಿ ರೇವಣ್ಣ ಹೇಳಿದ್ದಾರೆ ಎನ್ನಲಾದ ವಿಡಿಯೊ ವೈರಲ್‌ ಆಗಿದ್ದು ಪರಿಣಾಮ ಬೀರಬಹುದು.

ಸರ್ಕಾರದ ಯೋಜನೆಗಳೇ ಶ್ರೀರಕ್ಷೆ: ‌ಮಹೇಶ್‌ ಅವರ ಹ್ಯಾಟ್ರಿಕ್‌ ಓಟಕ್ಕೆ ಬ್ರೇಕ್‌ ಹಾಕಲು ರವಿಶಂಕರ್‌ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳನ್ನು ತಮ್ಮ ಕಾರ್ಯಕ್ರಮಗಳು ಎಂಬಂತೆ ಜೆಡಿಎಸ್‌ ಅಭ್ಯರ್ಥಿಯು ಬಿಂಬಿಸಿಕೊಂಡಿದ್ದಾರೆ ಎಂದು ಹೇಳುತ್ತಾ ಪ್ರಚಾರದಲ್ಲಿ ತೊಡಗಿದ್ದಾರೆ. ‘2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡಿದ ಗ್ರಾಮಗಳನ್ನು ಶಾಸಕರು ನಿರ್ಲಕ್ಷಿಸಿದ್ದಾರೆ’ ಎಂದು ಆರೋಪಿಸುತ್ತಿದ್ದಾರೆ. ಅವರು ಜಿಲ್ಲಾ ಪಂಚಾಯಿತಿ ಸದಸ್ಯ ಕೂಡ. ಇವರ ತಂದೆ ದೊಡ್ಡಸ್ವಾಮಿಗೌಡ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆ ಅನುಕಂಪದ ನೆರವಿನ ಆಸರೆಯನ್ನೂ ಬಯಸಿದ್ದಾರೆ.

ಏಕೈಕ ಮಹಿಳೆ: ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ಪೈಕಿ ಟಿಕೆಟ್‌ ಗಿಟ್ಟಿಸಿಕೊಂಡ ಏಕೈಕ ಮಹಿಳೆ ಎಚ್‌.ಜಿ.ಶ್ವೇತಾ. ಇವರು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ವಕ್ತಾರ ಗೋಪಾಲ್‌ ಪತ್ನಿ.

‘ಟಿಕೆಟ್‌ ಗಿಟ್ಟಿಸಿಕೊಂಡಿದ್ದೇ ನನ್ನ ಮೊದಲ ಗೆಲುವು. ಮಹಿಳೆಯನ್ನು ಗೆಲ್ಲಿಸಿ; ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಲು ಒಂದು ಅವಕಾಶ ಮಾಡಿಕೊಡಿ’ ಎಂದು ಮತಯಾಚನೆಯಲ್ಲಿ ತೊಡಗಿದ್ದಾರೆ. ಆದರೆ, ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೆ ಎರಡನೇ ಸ್ಥಾನ ಪಡೆಯಲು ಕೂಡ ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ‍ಪಕ್ಷದ ಬೇರುಗಳು ಬಲಿಷ್ಠವಾಗಿಲ್ಲ. ಜೊತೆಗೆ ಬಂಡಾಯದ ಬಿಸಿಯೂ ಇದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಹೊಸಹಳ್ಳಿ ವೆಂಕಟೇಶ್‌ ಅವರು ಮುನಿಸಿಕೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಲಾಭ ತಮ್ಮ ತಟ್ಟೆಗೆ ಬಂದು ಬೀಳಬಹುದೇ ಎಂಬುದನ್ನು ಕಾಂಗ್ರೆಸ್‌–ಜೆಡಿಎಸ್‌ ಅಭ್ಯರ್ಥಿಗಳು ಕಾಯುತ್ತಿದ್ದಾರೆ.

**
ಉನ್ನತ ಶಿಕ್ಷಣ ಪಡೆದ ಹಲವರು ನಿರುದ್ಯೋಗಿಗಳಾಗಿದ್ದಾರೆ. ಯುವಕ, ಯುವತಿಯರಿಗೆ <br/>ಉದ್ಯೋಗ ಸೃಷ್ಟಿಸುವ ಯಾವುದೇ ಕೆಲಸ ನಡೆದಿಲ್ಲ. ಕೈಗಾರಿಕೆಗಳೂ ಇಲ್ಲ 
– ಜಯರಾಜ್‌, ಭೇರ್ಯ

***
30 ವರ್ಷಗಳಿಂದ ವೋಟ್‌ ಹಾಕುತ್ತಲೇ ಇದ್ದೇನೆ. ನನಗೆ 50 ವರ್ಷ ವಯಸ್ಸಾದರೂ ಕೃಷ್ಣರಾಜನಗರ ಬದಲಾಗಲಿಲ್ಲ. ಯಾವುದೇ ಭರವಸೆ ಇಟ್ಟುಕೊಳ್ಳದೇ ಈ ಬಾರಿ ವೋಟ್‌ ಹಾಕುತ್ತೇನೆ‌
– ಸರ್ವೇಶ್‌ ಗೌಡ, ಕೆ.ಆರ್‌.ನಗರ

**
ಪದೇಪದೇ ಒಂದೇ ಪಕ್ಷ ಗೆಲ್ಲಬಾರದು ಎಂಬುದು ನನ್ನ ವಾದ. ಕೆಲ ಸಂದರ್ಭಗಳಲ್ಲಿ ಆ ವಾದ ತಪ್ಪಾಗಬಹುದು. ಎದುರಾಳಿ ಸಾಮರ್ಥ್ಯ, ಕೆಲಸ ಕಾರ್ಯಗಳ ಮೇಲೆ ನಿಂತಿದೆ ‌
ಸುದರ್ಶನ್‌, ಸಾಲಿಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT