ದಾವಣಗೆರೆ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ಕಾಯ್ದೆ ವಿರೋಧಿಸಿ ದೇಶದಾದ್ಯಂತ ರೈತ ಪರ ಸಂಘಟನೆಗಳು ದೆಹಲಿಯಲ್ಲಿ ಹಮ್ಮಿಕೊಂಡಿರುವ ಹೋರಾಟವನ್ನು ಬೆಂಬಲಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಘಟಕದಿಂದ ಇಲ್ಲಿನ ಗಾಂಧಿ ಸರ್ಕಲ್ನಲ್ಲಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ದೆಹಲಿಯಲ್ಲಿ ರೈತ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ರೈತರು ದೆಹಲಿ ಪ್ರವೇಶ ತಡೆಗೆ ಇನ್ನಿಲ್ಲದ ಪ್ರಯತ್ನ ನಡೆಸಿರುವುದನ್ನು ಖಂಡಿಸಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮೂಲಕ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ದೇಶದ ಬೆನ್ನೆಲುಬಾದ ರೈತರನ್ನು ಬೀದಿಗೆ ತಳ್ಳುವ ಕೆಲಸಗಳಾಗಿವೆ. ರೈತರು ಮಾತ್ರ ಭೂಮಿ ಖರೀದಿಸಲು ಇದ್ದಂತಹ ಹಕ್ಕನ್ನು ಇನ್ನಿಲ್ಲದಂತೆ ಮಾಡಿದೆ. ಹಣವುಳ್ಳ ಶ್ರೀಮಂತರು, ಕಪ್ಪು ಹಣ ಹೊಂದಿರುವ ಖದೀಮರು 594 ಎಕರೆ ವರೆಗೆ ಜಮೀನು ಖರೀದಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆಹಾರದ ಕೃತಕ ಅಭಾವ ಸೃಷ್ಟಿಸಿ, ಆಹಾರ ಧಾನ್ಯಗಳ ಬೆಲೆ ಏರಿಕೆಗೂ ಇದು ಕಾರಣವಾಗಿದೆ ಎಂದು ಪಿಐ ಹಿರಿಯ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಆರೋಪಿಸಿದರು.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಹೋರಾಟ ನಡೆಸಲು ದೇಶದ ವಿವಿಧೆಡೆಯಿಂದ ದಿಲ್ಲಿಗೆ ಹೊರಟ ರೈತರನ್ನು ಆಯಾ ರಾಜ್ಯಗಳ ಗಡಿಗಳಲ್ಲಿ, ದೆಹಲಿ ಗಡಿ ಭಾಗದಲ್ಲಿ ತಡೆಯುವ ಮೂಲಕ ಅನ್ನದಾತರ ಹೋರಾಟವನ್ನು ಹತ್ತಿಕ್ಕುವ ದುಸ್ಸಾಹಸವನ್ನು ಸರ್ಕಾರಗಳು ಮಾಡುತ್ತಿವೆ. ಕೇಂದ್ರ, ರಾಜ್ಯ ಸರ್ಕಾರಗಳು ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿ, ಕಾಯ್ದೆಗಳನ್ನು, ತಿದ್ದುಪಡಿ ಕಾಯ್ದೆಗಳನ್ನು ಜನ ವಿರೋಧದ ಮಧ್ಯೆಯೂ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುತ್ತಿವೆ. ಇದು ಅಕ್ಷಮ್ಯ ಎಂದು ಅವರು ಹೇಳಿದರು.
ಪಕ್ಷದ ಮುಖಂಡ ಆವರಗೆರೆ ವಾಸು, ಜಿಲ್ಲಾ ಖಜಾಂಚಿ ಆನಂದರಾಜ್, ಆವರಗೆರೆ ಎಚ್.ಜಿ. ಉಮೇಶ, ರೈತ ಸಂಘದ ಹೊನ್ನೂರು ಮುನಿಯಪ್ಪ, ಆವರಗೆರೆ ಚಂದ್ರು, ಐರಣಿ ಚಂದ್ರು, ಸರೋಜಮ್ಮ, ವಿಶಾಲಾಕ್ಷಮ್ಮ, ರಾಜು ಕೆರೇನಹಳ್ಳಿ, ನಿಟುವಳ್ಳಿ ಬಸಣ್ಣ, ರಮೇಶ ಸಿ.ದಾಸರ, ರಂಗನಾಥ ನರೇಗಾ ಅವರೂ ಇದ್ದರು