ಸಾಸ್ವೆಹಳ್ಳಿ: ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಜೋರು ಮಳೆಯಾಗಿದೆ. ಮಧ್ಯಾಹ್ನ ಮಳೆ ಆರಂಭಗೊಂಡಿತು.
ವಾರದಿಂದ ಮಳೆ ಇಲ್ಲದ ಕಾರಣ ಜನರು ತೆಂಗು, ಅಡಿಕೆ, ಬಾಳೆ, ಎಲೆ ಬಳ್ಳಿ ತೋಟಗಳಿಗೆ ನೀರು ಬಿಡಲು ತಯಾರಿ ನಡೆಸಿದ್ದರು. ಮಂಗಳವಾರ ಹೋಬಳಿಯ ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿತ್ತು. ಬುಧವಾರ ಸುತ್ತಮುತ್ತಲ ಗ್ರಾಮಗಳಲ್ಲಿ ಹದ ಮಳೆ ಬಂದಿದ್ದು, ಇಳೆಯನ್ನು ತಂಪುಗೊಳಿಸಿದೆ ಎನ್ನುತ್ತಾರೆ ರೈತ ಬಸವರಾಜಪ್ಪ.
‘ಹೊನ್ನಾಳಿ ತಾಲ್ಲೂಕಿನ ಗಡಿಭಾಗವಾದ ಚನ್ನೇನಹಳ್ಳಿ, ಭೈರನಹಳ್ಳಿ, ಕರಡಿಕ್ಯಾಂಪ್ ಗ್ರಾಮಗಳಲ್ಲಿ ಮಳೆ ಇಲ್ಲ. ಬುಧವಾರ ಕ್ಯಾಸಿನಕೆರೆ, ಚಿಲಾಪುರದಲ್ಲಿ ಸಾಧಾರಣ ಮಳೆಯಾಗಿದೆ. ನಮಗೆ ಮಳೆ ಬೇಕು ತೋಟಗಳಿಗೆ ಪಂಪ್ಸೆಟ್ ಮೂಲಕ ನೀರು ಹಾಯಿಸುತ್ತಿದ್ದೇವೆ’ ಎಂದು ಭೈರನಹಳ್ಳಿಯ ರಾಜಶೇಖರ್ ತಿಳಿಸಿದರು.
ಹೊಸಹಳ್ಳಿಯ ತಗ್ಗಿನ ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನರು ಸಹಾಸದೊಂದಿಗೆ ನೀರು ಹೊರ ಹಾಕಿದರು.