ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ ಮಳೆಯ ಸಿಂಚನ

ಹಿಂಗಾರು ಬೆಳೆಗಳಿಗೆ ಅನುಕೂಲ l ಪಾಪ್‌ಕಾರ್ನ್‌ ಜೋಳ ಕೊಯ್ಲಿಗೆ ಅಡ್ಡಿ
Last Updated 1 ಅಕ್ಟೋಬರ್ 2022, 4:08 IST
ಅಕ್ಷರ ಗಾತ್ರ

ದಾವಣಗೆರೆ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಗುರುವಾರ ರಾತ್ರಿಯಿಂದಲೇ ಆರಂಭವಾದ ಮಳೆ ಶುಕ್ರವಾರ ಬೆಳಿಗ್ಗೆ ಜಿಟಿಜಿಟಿಯಾಗಿ ಸುರಿದು ಸಂಜೆಯ ವೇಳೆ ಜೋರಾಗಿ ಸುರಿಯಿತು. ಜಿಲ್ಲೆಯಲ್ಲಿ ಸರಾಸರಿ 14.2 ಮಿ.ಮೀ ಮಳೆಯಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 9.3 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 19.9 ಮಿ.ಮೀ, ಹರಿಹರದಲ್ಲಿ 11.2 ಮಿ.ಮೀ, ಹೊನ್ನಾಳಿ ತಾಲ್ಲೂಕಿನಲ್ಲಿ 7.1 ಹಾಗೂ ಜಗಳೂರು ತಾಲ್ಲೂಕಿನಲ್ಲಿ 23.09 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಶೇ 168ರಷ್ಟು ಹೆಚ್ಚು ಮಳೆ ಸುರಿದಿದೆ.

‘ಪಾಪ್‌ಕಾರ್ನ್ ಮೆಕ್ಕೆಜೋಳ ಕೋಯ್ಲಿಗೆ ಬಂದಿದ್ದು, ಕಡಲೆ ಬಿತ್ತನೆಯಾಗಬೇಕಿತ್ತು. ಹೆಚ್ಚಿನ ಮಳೆ ಆಗಿಲ್ಲದೇ ಇರುವುದರಿಂದ ಏನು ಸಮಸ್ಯೆ ಇಲ್ಲ. ಹಿಂಗಾರು ಬೆಳೆಗಳಿಗೆ ಈ ಮಳೆ ಅನುಕೂಲವಾಗುತ್ತದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಹೇಳಿದರು.

‘ಮಳೆ ಜಾಸ್ತಿಯಾಗಿರುವುದರಿಂದ ಪಾಪ್‌ಕಾರ್ನ್ ಜೋಳ ಕೊಯ್ಲು ಮಾಡುವುದು ಸೂಕ್ತವಲ್ಲ. ಹಾಗೆಯೇ ಬಿಡಲು ಆಗುವುದಿಲ್ಲ. ಕೊಯ್ಲು ಮಾಡಿ ನೆರಳಿನಲ್ಲಿ ಶೇಖರಣೆ ಮಾಡುವುದು ಒಳ್ಳೆಯದು’ ಎಂದು ಬಬ್ಬೂರು ಫಾರಂನ ಗ್ರಾಮೀಣ ಕೃಷಿ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಡಾ.ನಾಗರಾಜ್ ಸಲಹೆ ನೀಡಿದರು.

‘ಬಿಸಿಲು, ಮೋಡ ಮುಸುಕಿದ ವಾತಾವರಣ ಇದ್ದಾಗ ಕೊಯ್ಲ ಮಾಡಿ ಅದನ್ನು ನೆರಳಿನಲ್ಲಿ ಸಂಗ್ರಹಿಸಬೇಕು. ಮಳೆ ಬಂದಾಗ ಕೊಯ್ಲು ಮಾಡಿದರೆ ತೇವಾಂಶ ಜಾಸ್ತಿಯಾಗಿ ಮೊಳಕೆ ಬರುವ ಸಂಭವ ಉಂಟು’ ಎಂದು ಹೇಳಿದರು.

ಬಿರುಸಿನ ಮಳೆ

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಬಿರುಸಿನ ಮಳೆಯಾಗಿದೆ. ಮಳೆಯಿಂದ ಸುಗಮ ಕೃಷಿ ಚಟುವಟಿಕೆ ಕಾರ್ಯಗಳು ಸ್ಥಗಿತಗೊಳ್ಳವಂತಾಗಿದೆ. ಶುಕ್ರವಾರವೂ ತಾಲ್ಲೂಕಿನಾದ್ಯಂತ ತುಂತುರು ಮಳೆಯಾಗಿದೆ.

‘ಚನ್ನಗಿರಿಯಲ್ಲಿ 13.3 ಮಿಮೀ, ದೇವರಹಳ್ಳಿ 18.4, ಕತ್ತಲಗೆರೆ 9.1, ತ್ಯಾವಣಿಗೆ 15, ಬಸವಾಪಟ್ಟಣ 0.2, ಜೋಳದಹಾಳ್ 2.4, ಸಂತೇಬೆನ್ನೂರು 9.2, ಉಬ್ರಾಣಿ 3.2 ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 4.8 ಮಿ.ಮೀ ಮಳೆಯಾಗಿದೆ. ಮಳೆಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ’ ಎಂದು ತಹಶೀಲ್ದಾರ್
ಡಾ. ಪಟ್ಟರಾಜಗೌಡ
ತಿಳಿಸಿದರು.

ಹಿಂಗಾರು ಬಿತ್ತನೆ ಮುಂದೂಡಿಕೆ

ಹರಿಹರ: ಗುರುವಾರ ರಾತ್ರಿಯಿಂದ ಮತ್ತೆ ಆರಂಭವಾದ ಜಿಟಿಜಿಟಿ ಮಳೆ ಹಿಂಗಾರು ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗಿದೆ.

‘ಈ ಹಿಂದೆ ಸುರಿದ ಅತಿಯಾದ ಮಳೆಯಿಂದ ಶೀತಬಾಧೆಯಿಂದ ಕೊಳೆತಿದ್ದ ಮೆಕ್ಕೆಜೋಳ ಬೆಳೆ ತೆಗೆದು ಹಿಂಗಾರು ಬಿತ್ತನೆಗೆ ತಾಲ್ಲೂಕಿನ ರೈತರು ಭೂಮಿ ಸಿದ್ಧಗೊಳಿಸುತ್ತಿದ್ದರು. ಮಳೆಯ ಕಾರಣ ರೈತರು ಬಿತ್ತನೆ ಕಾರ್ಯ ಮುಂದೂಡಬೇಕಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ನಾರನಗೌಡ ತಿಳಿಸಿದರು.

‘ಹಿಂಗಾರು ಅವಧಿಯಲ್ಲಿ ರಾಗಿ, ಅಲಸಂದೆ, ಸೂರ್ಯಕಾಂತಿ ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದರು. ಮಳೆಯ ಮುಂದೂಡಬೇಕಿದೆ. ಮಳೆ ಹಾಗೂ ಮೋಡ ಮುಚ್ಚಿದ ವಾತಾವರಣ ಹೀಗೆ ಮುಂದುರಿದರೆ ಭತ್ತದ ಬೆಳೆಯಲ್ಲಿ ಹೂಬಿಡುವ ಪ್ರಕ್ರಿಯೆಗೆ ತೊಂದರೆಯಾಗಲಿದೆ. ಮಳೆ ಇನ್ನೂ ನಾಲ್ಕು ದಿನ ಇರುವ ಬಗ್ಗೆ ತಜ್ಞರು ಮುನ್ಸೂಚನೆ ನೀಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಹರಿಹರದಲ್ಲಿ 14.4 ಮಿ.ಮೀ, ಮಲೇಬೆನ್ನೂರಿನಲ್ಲಿ 9.8, ಕೊಂಡಜ್ಜಿಯಲ್ಲಿ 5.4, ಹೊಳೆಸಿರಿಗೆರೆಯಲ್ಲಿ 8.8, ಸರಾಸರಿ 9.60 ಮಿ.ಮೀ. ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT