ತೀರ್ಥಗಿರಿಯಲ್ಲಿ ಹಲವು ಪೌರಾಣಿಕ ಮತ್ತು ಚಾರಿತ್ರಿಕ ಕುರುಹುಗಳು ಕಾಣಸಿಗುತ್ತವೆ. ಈ ಕ್ಷೇತ್ರ ರಾಮಾಯಣ ಕಾಲದಿಂದಲೂ ಪ್ರಸಿದ್ಧಿಯಲ್ಲಿತ್ತು ಎನ್ನುವ ಐತಿಹ್ಯ ಇದೆ. ರಾಮಾಯಣ ಕಾಲದಲ್ಲಿ ವನವಾಸದಲ್ಲಿದ್ದ ರಾಮನು ಸೀತಾ, ಲಕ್ಷ್ಮಣರೊಂದಿಗೆ ಈ ಬೆಟ್ಟದ ತಪ್ಪಲಿಗೆ ಬಂದಾಗ ಬಾಯಾರಿಕೆಯಾಗುತ್ತದೆ. ಸುತ್ತಲೂ ನೀರಿಗಾಗಿ ಹುಡುಕಿದಾಗ ಎಲ್ಲಿಯೂ ನೀರು ದೊರಕುವುದಿಲ್ಲ. ಆಗ ರಾಮನು ಭೂಮಿಗೆ ಬಾಣ ಹೊಡೆಯಲು ಕ್ಷಣದಲ್ಲಿಯೇ ನೀರು ಚಿಮ್ಮುತ್ತದೆ. ಮೂವರೂ ನೀರನ್ನು ಕುಡಿದು ತೃಪ್ತರಾಗುತ್ತಾರೆ. ಈ ನೀರು ಕಾಶೀ ತೀರ್ಥದಷ್ಟೇ ರುಚಿಯಾಗಿದೆ ಎಂದು ಕಾಶೀ ತೀರ್ಥ ಎಂದು ರಾಮನು ಕರೆಯುತ್ತಾನೆ. ನಂತರದಲ್ಲಿ ಉದ್ಭವಗೊಂಡ ಲಿಂಗವನ್ನು ಪೂಜಿಸಿ ಮುಂದೆ ಸಾಗಿದರು. ತೀರ್ಥ, ರಾಮ ಹಾಗೂ ಈಶ್ವರರ ಸಂಗಮ ಕ್ಷೇತ್ರವೇ ತೀರ್ಥರಾಮೇಶ್ವರ ಪುಣ್ಯಕ್ಷೇತ್ರ ಎಂಬ ಐತಿಹ್ಯವಿದೆ.