ದಾವಣಗೆರೆ: ಅಖ್ತರ್ರಾಜಾ ಸರ್ಕಲ್ ರಿಂಗ್ ರೋಡ್ ರಸ್ತೆಯಿಂದ ಅಹಮದ್ ನಗರ, ಬಾಷಾ ನಗರ, ಆಜಾದ್ ನಗರ ಮುಖ್ಯರಸ್ತೆಯ ವಿಸ್ತರಣೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಬುಧವಾರ ಜಿಲ್ಲಾಡಳಿತ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅರ್ಧಕ್ಕೆ ನಿಂತಂಥ ಸ್ಮಾರ್ಟ್ಸಿಟಿ ಕೆಲಸಗಳು ಪೂರ್ಣಗೊಳ್ಳಬೇಕು ಎನ್ನುವ ದೃಷ್ಟಿಯಿಂದ ಈ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಅತಿಕ್ರಮಣ, ಒತ್ತುವರಿಯನ್ನು ಸರಿಪಡಿಸುವ, ತೆರವುಗೊಳಿಸುವುದರ ಮೂಲಕ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಸ್ಥಳೀಯ ಶಾಸಕರ ನೆರವಿನೊಂದಿಗೆ ಈ ಭಾಗದ ಕಾರ್ಪೊರೇಟರ್ ಹಾಗೂ ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಅದಕ್ಕಾಗಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಮೇಯರ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಒತ್ತುವರಿ ತೆರವುಗೊಳಿಸಲು ನಮ್ಮ ಅಡ್ಡಿಯಿಲ್ಲ ಎಂದುಈಗಾಗಲೇ ಮುಖಂಡರು, ಧಾರ್ಮಿಕ ಸಮಿತಿ ತಿಳಿಸಿದ್ದಾರೆ. ಜಿಲ್ಲೆಗೆ ಇದೊಂದು ಮಾದರಿ ರಸ್ತೆಯಾಗಬೇಕು. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಮೇಯರ್ ಬಿ.ಜಿ.ಅಜಯ್ ಕುಮಾರ್ ಮಾತನಾಡಿ, ‘ಸುಮಾರು ಮೂವತ್ತು ವರ್ಷಗಳಿಂದ ರಸ್ತೆ ವಿಸ್ತರಣೆಯಾಗಿರಲಿಲ್ಲ. ಈ ಭಾಗದ ಧಾರ್ಮಿಕ ಮುಖಂಡರು ಹಾಗೂ ಜನರು ಮನವಿ ಸಲ್ಲಿಸಿದ್ದರು. ಆದಷ್ಟು ಬೇಗ ರಸ್ತೆ ತೆರವುಗೊಳಿಸಿ 60 ಅಡಿ ರಸ್ತೆ ನಿರ್ಮಿಸಬೇಕು ಎಂಬುದು ಅವರ ಒತ್ತಾಯವಾಗಿತ್ತು’ ಎಂದು ತಿಳಿಸಿದರು.
ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರೊಂದಿಗೆ ಈ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಶುರು ಮಾಡಲಾಗುವುದು. ಪಾಲಿಕೆ ಎಂಜಿನಿಯರ್ಗಳು ಸರ್ವೆ ಮಾಡುತ್ತಿದ್ದಾರೆ. ಯಾರ ಜಾಗ ಎಷ್ಟು ತೆರವುಗೊಳಿಸಬೇಕೆಂದು ಚರ್ಚಿಸಲಾಗುವುದು. ಬಳಿಕ ಶಾಸಕರು ಹಾಗೂ ಡಿಸಿ ಅವರೊಂದಿಗೆ ಸೇರಿಕೊಂಡು ಚರ್ಚೆ ಮಾಡಿ ಅವರಿಗೆ ಕಾನೂನಿನ ಅಡಿಯಲ್ಲಿ ಅನುಕೂಲ ಕಲ್ಪಿಸುವ ಅವಕಾಶವಿದ್ದರೆ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರೂ ಇದ್ದರು.