ಸಂತೇಬೆನ್ನೂರು: ಮೊದಲ ದಿನವೇ ಕರ್ನಾಟಕ ಪಬ್ಲಿಕ್ ಸ್ಕೂಲ್ನ 1ನೇ ತರಗತಿ ವಿದ್ಯಾರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಹಾಜರಾಗಿರುವುದು ಸಂತೋಷ ತಂದಿದೆ ಎಂದು ಡಯಟ್ ಹಿರಿಯ ಉಪನ್ಯಾಸಕ ಎಂ.ಮಂಜುನಾಥ ಸ್ವಾಮಿ ಎಂದು ತಿಳಿಸಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಏರಿಕೆ ಆಗಿದೆ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶೈಕ್ಷಣಿಕ ವರ್ಷದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಇಲಾಖೆ ರೂಪಿಸಿದೆ’ ಎಂದರು.
ಶಾಲಾ ಆವರಣವನ್ನು ಬಾಳೆ ಕಂದು, ಮಾವಿನ ತೋರಣದಿಂದ ಅಲಂಕರಿಸಲಾಗಿತ್ತು. ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು. ಪಾಯಸದ ಸಿಹಿ ಊಟ ಬಡಿಸಲಾಯಿತು. ಹೋಬಳಿಯ 20 ಸರ್ಕಾರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಗಮನ ಸೆಳೆಯಿತು.
ಡಯಟ್ ಉಪನ್ಯಾಸಕರಾದ ಆರ್.ಜಯನಾಯಕ, ಎಂ.ಆರ್.ನಾಯಕ, ಉಪ ಪ್ರಾಚಾರ್ಯ ಜಯಪ್ಪ, ಸಿಆರ್ಪಿಗಳಾದ ಶಂಕರಗೌಡ, ಕುಸುಮಾ, ಮುಖ್ಯ ಶಿಕ್ಷಕ ಉಜ್ಜಿನಪ್ಪ, ಶಿಕ್ಷಕ ಎಂ.ಬಿ.ನಾಗರಾಜ ಕಾಕನೂರು, ಕೆ.ಬಿ.ಮಂಜಪ್ಪ ಇದ್ದರು.