ಬಸವಾಪಟ್ಟಣ: ಚಳಿಗಾಲದಲ್ಲಿ ಬೆಂಕಿಯ ಕೆನ್ನಾಲಿಗೆಯಿಂದ ಸುಟ್ಟು ಕರಕಲಾಗುವ ಜಿಲ್ಲೆಯ ಸುಂದರ ತಾಣಗಳಲ್ಲಿ ಒಂದಾದ ಸೂಳೆಕೆರೆ ಗುಡ್ಡ ಮಳೆಯ ಪರಿಣಾಮ ಮತ್ತೆ ಹಸಿರು ಹೊದ್ದು, ನೋಡುಗರ ಕಣ್ಣು ತಣಿಸುತ್ತಿದೆ.
ಏಷ್ಯಾದ ಎರಡನೇ ದೊಡ್ಡ ಕೆರೆ ಸೂಳೆಕೆರೆಯ ಅಂದಕ್ಕೆ ಅದರ ಇಕ್ಕೆಲಗಳಲ್ಲಿರುವ ಮುಗಿಲೆತ್ತರದ ಗುಡ್ಡಗಳು ಮೆರುಗು ನೀಡಿವೆ. ಆದರೆ, ಈ ಗುಡ್ಡಗಳಲ್ಲಿ ಬೆಳೆಯುವ ಹುಲ್ಲು ಚಳಿಗಾಲದಲ್ಲಿ ಒಣಗುತ್ತದೆ. ಕಿಡಿಗೇಡಿಗಳು ಅದಕ್ಕೆ ಹಚ್ಚುವ ಬೆಂಕಿ ಅಲ್ಲಿನ ಇಡೀ ಪರಿಸರವನ್ನು ನಾಶ ಮಾಡಿ ಅಂದಗೆಡಿಸುತ್ತದೆ. ಅರಣ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಈಚೆಗೆ ಬಿದ್ದ ಅಲ್ಪ ಸ್ವಲ್ಪ ಮಳೆಗೆ ಸೂಳೆಕೆರೆಯ ಗುಡ್ಡಗಳು ಮತ್ತೆ ಮೈದುಂಬಿಕೊಂಡಿವೆ.
ಈ ಕಾಡಿನಲ್ಲಿ ಬೆಲೆ ಬಾಳುವ ಮರಗಳೊಂದಿಗೆ ಚಿರತೆಗಳು, ಕಡವೆಗಳು, ಕರಡಿಗಳು, ಮೊಲಗಳು, ಕೊಂಡು ಕುರಿಗಳು, ನವಿಲುಗಳು ಹೇರಳವಾಗಿವೆ. ಗುಡ್ಡಕ್ಕೆ ಬೆಂಕಿ ಹತ್ತಿದಾಗ ಈ ಪ್ರಾಣಿಗಳು ನೆಲೆ ಕಳೆದುಕಂಡು ಆಹಾರ ಮತ್ತು ನೀರಿಗಾಗಿ ಪರಿತಪಿಸುವುದು ಸಾಮಾನ್ಯವಾಗಿದೆ.
‘ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು. ದೇಶದ ಸಿರಿ ಸಂಪತ್ತುಗಳೆನಿಸಿದ ಕಾಡು ಹಾಗೂ ಕಾಡು ಪ್ರಾಣಿಗಳನ್ನು ರಕ್ಷಿಸಲು ಅಲ್ಲಿ ಬೆಂಕಿ ಹಾಕುವ ವಿಕೃತ ಕಾರ್ಯವನ್ನು ನಿಲ್ಲಿಸಬೇಕು’ ಎಂದು ಇಲ್ಲಿನ ಪರಿಸರ ಪ್ರೇಮಿ ಡಾ.ಬಸವನಗೌಡ ಕುಸಗೂರ್, ಡಾ.ಬಿ.ಎನ್. ರಂಗಪ್ಪ, ಸಾಹಿತಿ ನಿಲೋಗಲ್ ರಂಗನಗೌಡ, ನಿವೃತ್ತ ಶಿಕ್ಷಕ ಎಂ.ಎಸ್. ಸಂಗಮೇಶ್ ಆಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.