‘ಸಿಐಡಿ ಪೊಲೀಸ್ ತಂಡವು ಸ್ಥಳ ಮಹಜರಿಗಾಗಿ ಆರೋಪಿ ಜೊತೆಗೆ ಮಂಗಳವಾರ ದಾವಣಗೆರೆಯ ಮಾಯಕೊಂಡಕ್ಕೆ ಬಂದಿತ್ತು. ಇಲ್ಲಿಗೆ ಸಮೀಪದ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಚಾಕು ಸಿಕ್ಕಿದೆ’ ಎಂದು ಮೂಲಗಳು ತಿಳಿಸಿವೆ.
‘ಆರೋಪಿಯು ರೈಲಿನಲ್ಲಿ ಬರುವಾಗ ಚಿಕ್ಕಜಾಜೂರು-ಮಾಯಕೊಂಡ ಮಧ್ಯೆ ಗದಗ ಜಿಲ್ಲೆಯ ಲಕ್ಷ್ಮಿ ಎಂಬುವರಿಗೆ ಚಾಕುವಿನಿಂದ ಇರಿದು ಬಳಿಕ ಚಲಿಸುವ ರೈಲಿನಿಂದ ಕೆಳಗೆ ಜಿಗಿದಿದ್ದ. ನಂತರ ರೈಲ್ವೆ ಪೊಲೀಸರು, ರೈಲ್ವೆ ಇಲಾಖೆಯ ಕೀ ಮ್ಯಾನ್ಗಳ ಜತೆಗೂಡಿ ಹುಡುಕಾಟ ನಡೆಸಿದಾಗ, ಚಾಕು ಪತ್ತೆಯಾಗಿರಲಿಲ್ಲ.
‘ಅಂಜಲಿಗೆ ಕೊಲೆ ಮಾಡಿದ ಬಳಿಕ ಆರೋಪಿ ಗಿರೀಶ ಮೈಸೂರಿಗೂ ತೆರಳಿದ್ದ. ಹೀಗಾಗಿ ಸಿಐಡಿ ತಂಡವು ಗುರುವಾರ ಆತನನ್ನು ಮೈಸೂರಿಗೆ ಕರೆದೊಯ್ದು ತನಿಖೆ ನಡೆಸುವ ಸಾಧ್ಯತೆಯಿದೆ. ಮೇ 31ರವರೆಗೆ ಆತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಅಂದೇ ನ್ಯಾಯಾಂಗ ವಶಕ್ಕೆ ಒಪ್ಪಿಸುವರು. ಈಗ ಪತ್ತೆಯಾಗಿರುವ ಚಾಕುವಿನಿಂದಲೇ ಅಂಜಲಿಯ ಕೊಲೆಯಾಗಿತ್ತೆ ಎಂಬುದು ಖಚಿತವಾಗಬೇಕಿದೆ’ ಎಂದು ಮೂಲಗಳು ತಿಳಿಸಿವೆ.