ಸಂತೇಬೆನ್ನೂರು: ‘ಐದು ಬಾರಿ ಬಿಜೆಪಿಯ ಒಬ್ಬರೇ ವ್ಯಕ್ತಿಯನ್ನು ಗೆಲ್ಲಿಸಿರುವುದು ಸಂಪ್ರದಾಯವೇ? ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅವರ ಕೊಡುಗೆ ಏನು’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನಿಸಿದರು.
ಸಮೀಪದ ತಣಿಗೆರೆ ಗ್ರಾಮದಲ್ಲಿ ಬುಧವಾರ ಪ್ರಚಾರ ನಡೆಸಿ ಅವರು ಮಾತನಾಡಿದರು.
‘ಕಾಂಗ್ರೆಸ್ಗೆ ಹಿಂದಿನ ಚುನಾವಣೆಗಳಲ್ಲಿ ಚನ್ನಗಿರಿ ಕ್ಷೇತ್ರದಿಂದ ಕಡಿಮೆ ಮತಗಳು ಬಿದ್ದಿವೆ. ಬಿಜೆಪಿ ಸಂಸದರು ಎಷ್ಟು ಬಾರಿ ನಿಮ್ಮ ಪರ ದನಿ ಎತ್ತಿದ್ದಾರೆ? ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದೆ. ಈ ಬಾರಿ ಕಾಂಗ್ರೆಸ್ಗೆ ಮತ ನೀಡಿ’ ಎಂದು ಮನವಿ ಮಾಡಿದರು.
‘ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 25 ಗ್ಯಾರಂಟಿಗಳನ್ನು ಘೋಷಿಸಿದೆ. ಅದರಲ್ಲಿ ಪ್ರಮುಖವಾಗಿ ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಇದೆ. ಬಿಜೆಪಿ ಸಂಸದರು ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದಾಗ ಕರ್ನಾಟಕದ ಪರ ಎಷ್ಟು ಮಾತನಾಡಿದ್ದಾರೆ ಎಂದು ಮತದಾರರು ಪ್ರಶ್ನಿಸಬೇಕು’ ಎಂದರು.
‘ಈ ಬಾರಿ ಅವಕಾಶ ಮಾಡಿಕೊಡಿ. ದಾವಣಗೆರೆ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.
‘ಈ ಬಾರಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ಗೆ ಹೆಚ್ಚಿನ ಮತಗಳು ಬೀಳಲಿವೆ’ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.
ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಮುಖಂಡರಾದ ಹೊದಿಗೆರೆ ರಮೇಶ್, ವಡ್ನಾಳ್ ಜಗದೀಶ್, ವೀರೇಶ್ ನಾಯ್ಕ್ ಇದ್ದರು.