ದಾವಣಗೆರೆ: ‘ಬಿಜೆಪಿಯನ್ನು ಕಟ್ಟಲು ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಪ್ರತಿ ಮನೆಗೂ ಭೇಟಿ ನೀಡಿ ಪಕ್ಷವನ್ನು ಗೆಲ್ಲಿಸಿದ್ದೇನೆ. ನನ್ನನ್ನು ಉಚ್ಚಾಟಿಸಿರುವುದರಿಂದ ಯಾರಿಗೆ ಲಾಭವಾಗುತ್ತದೆಯೊ ಗೊತ್ತಿಲ್ಲ’ ಎಂದು ಪಕ್ಷೇತರ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ ಹೇಳಿದರು.
ಬಿಜೆಪಿಯಿಂದ ಉಚ್ಚಾಟಿಸಿರುವುದಕ್ಕೆಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು. ‘ಹಿರಿಯೂರಿನಲ್ಲಿ 65,600 ಮನೆಗಳಿಗೂ ಭೇಟಿ ನೀಡಿ ಪಕ್ಷವನ್ನು ಸಂಘಟಿಸಿದ್ದೇನೆ’ ಎಂದರು.
‘28 ಜಿಲ್ಲೆಗಳಲ್ಲಿ ನಮ್ಮ ಸಮಾಜದ ಪ್ರಭಾವ ಇದೆ. 5 ಜಿಲ್ಲೆಗಳ 33 ಕ್ಷೇತ್ರಗಳಲ್ಲಿ 20ರಲ್ಲಿ ನಮ್ಮ ಸಮಾಜದ ಮತಗಳು ನಿರ್ಣಾಯಕವಾಗಿದ್ದು, ಅವರೆಲ್ಲರೂ ನನ್ನನ್ನು ಕಣಕ್ಕೆ ಇಳಿಸಿದ್ದಾರೆ. ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.
ಪತ್ನಿ ಪೂರ್ಣಿಮಾ ಶ್ರೀನಿವಾಸ್ ಅವರ ಕುರಿತು ಉತ್ತರಿಸಿ, ‘ಅವರದ್ದು ವೈಯಕ್ತಿಕ ನಿರ್ಣಯ. ನಾವು ಏನೂ ಮಾಡಲು ಆಗುವುದಿಲ್ಲ. ಒಂದು ಮನೆಯಲ್ಲಿ ಇಬ್ಬರು ಮೂವರು ರಾಜಕಾರಣ ಮಾಡುತ್ತಾರೆ. ನಾವು ಮಾಡಬಾರದೇ? ನಾನು ಸಹಜವಾಗಿ ಮತದಾರರ ವಿಶ್ವಾಸ ಗಳಿಸಿದ್ದೇನೆ. ಬಿಜೆಪಿಗಳಿಂದ ಸ್ಪರ್ಧಿಸಬೇಕು ಎಂದು ಎಲ್ಲರೂ ಆಸೆ ಆದರೆ ಅವಕಾಶ ಸಿಗುವುದಿಲ್ಲ. ನಾನು ಮತದಾರರ ಪ್ರೀತಿ ಗಳಿಸಿದ್ದೇನೆ. ಹಾಗಾಗಿಯೇ ಧೈರ್ಯವಾಗಿ ಕಣದಲ್ಲಿ ಇದ್ದೇನೆ’ ಎಂದರು.
‘ನಾಮಪತ್ರ ಸಲ್ಲಿಸುವ ವೇಳೆ 5 ಸಾವಿರಕ್ಕೂ ಹೆಚ್ಚು ಮಂದಿ ನನ್ನ ಜೊತೆಯಲ್ಲಿದ್ದರು. ಅವರೆಲ್ಲರ ಅಭಿಪ್ರಾಯ ಕೇಳಿ ಕಣಕ್ಕೆ ಇಳಿದಿದ್ದೇನೆ. ಈವರೆಗೆ 44 ಸಾವಿರ ಮತದಾರರನ್ನು ನೋಂದಣಿ ಮಾಡಿಸಿದ್ದೇನೆ. ಕಣದಲ್ಲಿ ನಾನು ಅಹಿಂದ ಅಭ್ಯರ್ಥಿಯಾಗಿದ್ದು,ಬೇರೆಯವರಿಗೆ ಗೆಲುವಿನ ಅವಕಾಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ನಾನು ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.
ಮುಖಂಡರಾದ ಚಂದ್ರಶೇಖರ್, ಯಾಜ್ಞವಲ್ಕ ಸುರೇಶ್, ಬಸವನಗೌಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.