ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಐದು ವರ್ಷದಲ್ಲಿ 4,088 ಮಕ್ಕಳ ರಕ್ಷಣೆ

ರೈಲ್ವೆ ಮಕ್ಕಳ ಸಹಾಯವಾಣಿ–1098 ಸಿಬ್ಬಂದಿ ಕಾರ್ಯಾಚರಣೆ
Last Updated 24 ನವೆಂಬರ್ 2022, 11:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಿಧ ಕಾರಣಗಳಿಗಾಗಿ ಮನೆ ಬಿಟ್ಟು ಬಂದಿರುವ ಸುಮಾರು 4,088 ಮಕ್ಕಳನ್ನು ನಗರದ ರೈಲು ನಿಲ್ದಾಣದಲ್ಲಿ,ಕಳೆದ ಐದು ವರ್ಷಗಳಲ್ಲಿ ಹುಬ್ಬಳ್ಳಿ ರೈಲ್ವೆ ಮಕ್ಕಳ ಸಹಾಯವಾಣಿ-1098 ತಂಡ ರಕ್ಷಣೆ ಮಾಡಿದೆ. ಅದರಲ್ಲೂ ಈ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ 857 ಮಕ್ಕಳನ್ನು ರಕ್ಷಿಸಲಾಗಿದೆ. ಈ ರೀತಿ ಮನೆ ಬಿಟ್ಟು ಬಂದಿರುವವರಲ್ಲಿ ಬಾಲಕರೇ ಹೆಚ್ಚಾಗಿದ್ದಾರೆ.

ಬಡತನ, ನಗರದ ಆಕರ್ಷಣೆ, ಭಿಕ್ಷಾಟನೆ, ಆಮಿಷ, ಪ್ರೀತಿ–ಪ್ರೇಮದ ಆಕರ್ಷಣೆ, ಕುಟುಂಬದಲ್ಲಿ ಜಗಳ, ಪೋಷಕರಿಂದ ಅಥವಾ ಶಿಕ್ಷಕರಿಂದ ನಿಂದನೆ, ತಂದೆ ಅಥವಾ ತಾಯಿಯ ಅಕ್ರಮ ಸಂಬಂಧ, ಮಾದಕ ವಸ್ತುವಿನ ಚಟ, ತಾವು ಕೇಳಿದ್ದನ್ನು ಕೊಡಿಸಲಿಲ್ಲ ಎಂದು ಪಾಲಕರ ಮೇಲೆ ಕೋಪ, ಶಾಲೆಗೆ ಗೈರು ಹಾಜರಿ... ಹೀಗೆ ಹಲವು ಕಾರಣಗಳಿಗಾಗಿ 18 ವರ್ಷದವರೆಗಿನ ಈ ಮಕ್ಕಳು ಮನೆ ಬಿಟ್ಟು ಬಂದಿದ್ದಾರೆ.

ವಿವಿಧ ರಾಜ್ಯದವರು: ‘ನಿಲ್ದಾಣದಲ್ಲಿ ರಕ್ಷಿಸುವ ಮಕ್ಕಳು ಕೇವಲ ಕರ್ನಾಟಕದವರಷ್ಟೇ ಅಲ್ಲದೆ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ತಾನ, ಗೋವಾ, ಅಸ್ಸಾಂ, ಜಾರ್ಖಂಡ್, ಪಂಜಾಬ್ ಹಾಗೂ ಛತ್ತೀಸಗಡದ 857 ಮಕ್ಕಳನ್ನು ಈ ವರ್ಷದ ಅಕ್ಟೋಬರ್‌ವರೆಗೆ ರಕ್ಷಿಸಲಾಗಿದೆ. ಇದರಲ್ಲಿ 676 ಗಂಡು ಮಕ್ಕಳು ಹಾಗೂ 181 ಹೆಣ್ಣು ಮಕ್ಕಳಿದ್ದಾರೆ’ ಎಂದು ರೈಲ್ವೆ ಮಕ್ಕಳ ಸಹಾಯವಾಣಿಯ ಸಂಯೋಜಕ ಜಯಪ್ಪ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆ ಬಿಟ್ಟು ಬರುವ ಮಕ್ಕಳ ರಕ್ಷಣೆಗಾಗಿ ಸಹಾಯವಾಣಿಯ 12 ಸಿಬ್ಬಂದಿ ನಿಲ್ದಾಣದಲ್ಲಿ ನಿಗಾ ಇಟ್ಟಿರುತ್ತಾರೆ. ಜೊತೆಗೆ ನಿಲ್ದಾಣದಲ್ಲಿರುವ ಅಂಗಡಿಯವರು, ಟೀ/ಕಾಫಿ ಮಾರಾಟಗಾರರು, ಇತರ ಮಾರಾಟಗಾರರು, ನಿಲ್ದಾಣದಲ್ಲಿ ಕೆಲಸ ಮಾಡುವವರು, ರೈಲ್ವೆ ಪೊಲೀಸರು ಹಾಗೂ ಟಿಕೆಟ್ ಪರಿವೀಕ್ಷಕರು ಸಹ ಮಕ್ಕಳ ಬಗ್ಗೆ ಮಾಹಿತಿ ಒದಗಿಸುತ್ತಾರೆ. ಸಾರ್ವಜನಿಕರು ಸಹ 1098 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವುದುಂಟು. ಈ ರೀತಿ ವಾರಕ್ಕೆ ಏಳೆಂಟು ಕರೆಗಳು ಬರುತ್ತವೆ. ತಿಂಗಳಿಗೆ ಕನಿಷ್ಠ 90 ಮಕ್ಕಳು ಪತ್ತೆಯಾಗುತ್ತಾರೆ’ ಎಂದು ಹೇಳಿದರು.

‘ಪತ್ತೆಯಾದ ಮಕ್ಕಳನ್ನು ಕಚೇರಿಗೆ ಕರೆತಂದು ಅವರ ವಿವರವನ್ನು ಕಲೆ ಹಾಕುತ್ತೇವೆ. ನಂತರ, ರೈಲ್ವೆ ನಿಲ್ದಾಣದ ಮ್ಯಾನೇಜರ್ ಹಾಗೂ ರೈಲ್ವೆ ಪೊಲೀಸ್ ಠಾಣೆ ಗಮನಕ್ಕೆ ತರುತ್ತೇವೆ. ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸುತ್ತೇವೆ. ಸಮಿತಿ ನಿರ್ದೇಶನದ ಮೇರೆಗೆ, ತಾತ್ಕಾಲಿಕವಾಗಿ ಬಾಲಕರ/ಬಾಲಕಿಯರ ಬಾಲಮಂದಿರಕ್ಕೆ ಅವರನ್ನು ಕಳಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಮರಳಿ ಪೋಷಕರ ಮಡಿಲಿಗೆ
‘ಮನೆ ಬಿಟ್ಟು ಬರುವ ಬಹುತೇಕ ಮಕ್ಕಳನ್ನು ಮರಳಿ ಪೋಷಕರ ಮಡಿಲಿಗೆ ತಲುಪಿಸಲಾಗುತ್ತದೆ. ಕೆಲ ಮಕ್ಕಳು ಬೇಗನೆ ತಮ್ಮ ವೈಯಕ್ತಿಕ ಹಾಗೂ ಕುಟುಂಬದ ಮಾಹಿತಿಯನ್ನು ನೀಡುವುದಿಲ್ಲ. ಆಗ ಅವರಿಗೆ ವಿಶ್ವಾಸ ಬರುವಂತೆ ಕೌನ್ಸೆಲಿಂಗ್ ಮಾಡುತ್ತೇವೆ. ಬಾಲಮಂದಿರದಲ್ಲಿ ಏಳೆಂಟು ದಿನ ತಂಗಿದ ಬಳಿಕ, ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತಾರೆ’ ಎಂದು ಜಯಪ್ಪ ದೊಡ್ಡಮನಿ ಹೇಳಿದರು.

‘ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಪೋಷಕರ ವಿಳಾಸ ಪತ್ತೆ ಹಚ್ಚಿ ಮಕ್ಕಳನ್ನು ಅವರಿಗೆ ಒಪ್ಪಿಸುತ್ತಾರೆ. ಅದಕ್ಕೂ ಮುಂಚೆ ಪೋಷಕರಿಗೂ ಕೌನ್ಸೆಲಿಂಗ್ ಮಾಡಲಾಗುತ್ತದೆ. ಹುಬ್ಬಳ್ಳಿಯಿಂದ ದೇಶದ ವಿವಿಧ ನಗರಗಳಿಗೆ ರೈಲುಗಳು ಸಂಚರಿಸುತ್ತವೆ. ಹಾಗಾಗಿ, ವಿವಿಧ ರಾಜ್ಯಗಳ ಮಕ್ಕಳು ಜನರಲ್ ಬೋಗಿಗಳಲ್ಲಿ ಹತ್ತಿಕೊಂಡು ಇಲ್ಲಿಗೆ ಬರುತ್ತಾರೆ. ಕೆಲವೊಮ್ಮೆ ಒಬ್ಬರೇ ಅಥವಾ ಸ್ನೇಹಿತರೊಂದಿಗೆ ಮನೆ ಬಿಟ್ಟು ಬರುತ್ತಾರೆ. ಇತ್ತೀಚೆಗೆ ಜಾರ್ಖಂಡ್‌ನಿಂದ ಕೆಲಸ ಹುಡುಕಿಕೊಂಡು ಬಂದಿದ್ದ 12 ಮಕ್ಕಳನ್ನು ರಕ್ಷಿಸಿದ್ದೆವು. ನಿಲ್ದಾಣದಲ್ಲಿ ಪತ್ತೆಯಾಗುವ ಶೇ 45 ಮಂದಿ ಏಕ ಪೋಷಕರ ಮಕ್ಕಳಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT