ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ವೇತನ ಪರಿಷ್ಕರಣೆಗೆ ಯತ್ನ

ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಸಮ್ಮೇಳದಲ್ಲಿ ಶೆಟ್ಟರ್‌ ಭರವಸೆ
Last Updated 29 ಜನವರಿ 2023, 16:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮಲು ಅವರ ಗಮನಕ್ಕೆ ತಂದು, ಪರಿಷ್ಕರಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು’ ಎಂದು ಶಾಸಕ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ನಗರದ ಗೋಕುಲ ರಸ್ತೆಯ ವಿಶ್ವಶ್ರಮ ಚೇತನ ಆವರಣದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ 66ನೇ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಖಾಸಗಿ ಬಸ್‌ಗಳ ಸಂಚಾರ ನಿಯಂತ್ರಿಸಿ, ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಹೆಚ್ಚಾಗಿ ಬಳಸಲು ಅವಕಾಶ ನೀಡಲಾಗುವುದು. ಸಾರಿಗೆ ಸಂಸ್ಥೆಯ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಐದು ವರ್ಷ ಸಾರಿಗೆ ಸಂಸ್ಥೆ ಬಸ್‌ಗಳ ತೆರಿಗೆ ವಿನಾಯ್ತಿಗೆ ಕ್ರಮ ವಹಿಸಿದ್ದೆ. ಇದರಿಂದ ಸಂಸ್ಥೆಗೆ ವರ್ಷಕ್ಕೆ ಸುಮಾರು ₹8 ಕೋಟಿ ಲಾಭವಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಈ ಕುರಿತು ಮನವಿ ಮಾಡಲಾಗಿದೆ’ ಎಂದರು.

‘ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ವೇತನ ಸೇರಿದಂತೆ, ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ರಾಜ್ಯದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಿದಾಗ, ಗುತ್ತಿಗೆ ಪದ್ಧತಿ ನಿವಾರಣೆಯಾಗಲಿದೆ’ ಎಂದು ಹೇಳಿದರು.

ಮಹಾಮಂಡಳಿಯ ಉಪಾಧ್ಯಕ್ಷ ಈರಣ್ಣ ಮದವಾಲ, ಪ್ರಧಾನ ಕಾರ್ಯದರ್ಶಿ ಬಿ. ಜಯದೇವರಾಜೇ ಅರಸು, ಖಜಾಂಚಿ ಎನ್.ಆರ್. ದೇವರಾಜೇ ಅರಸು, ಜಿ. ಪ್ರಕಾಶಮೂರ್ತಿ, ಎ.ಎಸ್. ಒಂಟಿ, ಎನ್. ನಾರಾಯಣಸ್ವಾಮಿ, ಎಚ್.ಎಫ್. ಕವಳಿಕಾಯಿ, ಸುಲೋಚನಾ, ಮಂಜುಳಾ ನಾಯಕ, ರವೀಂದ್ರ ಶಿರೋಳಕರ, ಎಚ್.ಎಸ್. ಮಂಜುನಾಥ ಇದ್ದರು.

ಖಾಸಗೀಕರಣ ಬೇಡ: ಶರ್ಮಾ

‘ಸಾರಿಗೆ ಸಂಸ್ಥೆ ನೌಕರರ ಸಮಸ್ಯೆಗಳು ನಿವಾರಣೆಯಾಗದಿರುವುದಕ್ಕೆ ಸರ್ಕಾರ ಹಾಗೂ ಆಡಳಿತ ವರ್ಗವೇ ಕಾರಣ. ಯಾವುದೇ ಕಾರಣಕ್ಕೂ ಸಂಸ್ಥೆಯ ಖಾಸಗೀಕರಣಕ್ಕೆ ಅವಕಾಶ ನೀಡಬಾರದು. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನುಸಾರ ಸಂಬಳ ನೀಡಲು ಮುಂದಾಗಿರುವ ಸರ್ಕಾರ ಸಾರಿಗೆ ಸಂಸ್ಥೆಯ ನೌಕರರ ವೇತನವನ್ನು ಮಾತ್ರ ಪರಿಷ್ಕರಿಸಿಲ್ಲ’ ಎಂದು ಮಹಾಮಂಡಳಿ ಅಧ್ಯಕ್ಷ ಪ್ರೊ. ಕೆ.ಎಸ್. ಶರ್ಮಾ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT