ಹುಬ್ಬಳ್ಳಿ: ಫಿನಾಯಿಲ್ ಸೇವಿಸಿ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದ, ಈಚೆಗೆ ಕೊಲೆಯಾದ ಇಲ್ಲಿನ ವೀರಾಪುರ ಓಣಿಯ ನಿವಾಸಿ ಅಂಜಲಿ ಅವರ ಸಹೋದರಿ ಯಶೋಧಾಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಗುಣಮುಖರಾದ ಯಶೋಧಾ ಭಾನುವಾರ ಮನೆಗೆ ಮರಳಿದ್ದಾರೆ. ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮಠಾಧೀಶರ ಪ್ರತಿಭಟನೆ ವೇಳೆ ಯಶೋಧಾ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಆದರೆ, ತಡರಾತ್ರಿ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
‘ಅಕ್ಕ ಅಂಜಲಿಯನ್ನು ಕೊಲೆ ಮಾಡಿದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ಸುದ್ದಿಯಿಂದ ಯಶೋಧಾ ನೊಂದಿದ್ದಳು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಫಿನಾಯಿಲ್ ಸೇವಿಸಿದ್ದಳು‘ ಎಂದು ಅಜ್ಜಿ ಗಂಗಮ್ಮ ತಿಳಿಸಿದರು.