ಹುಬ್ಬಳ್ಳಿ: ಕೊಲೆಯಾದ ನೇಹಾ ಹಿರೇಮಠ ಅವರ ನಿವಾಸಕ್ಕೆ ಮುಸ್ಲಿಂ ಧರ್ಮಗುರುಗಳು, ಅಂಜುಮನ್ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಭಾನುವಾರ ಭೇಟಿ ನೀಡಿ, ಕುಟುಂಬ ವರ್ಗದವರಿಗೆ ಸಾಂತ್ವನ ನೀಡಿದರು.
ಈ ವೇಳೆ ಮಾತನಾಡಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, 'ನೇಹಾ ಕೊಲೆ ಅತ್ಯಂತ ಖಂಡನೀಯ. ಈ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿರುವುದು ಸರಿಯಲ್ಲ' ಎಂದರು.
'ಒಬ್ಬ ಕೊಲೆಯಾಗಿದ್ದಾನೆ ಅಂದರೆ, ಅದು ಇಡೀ ಜನಾಂಗದ ಕೊಲೆ ಎಂದು ಕುರಾನ್ ಹೇಳುತ್ತದೆ. ಈ ಪ್ರಕರಣವನ್ನು ಸಮಸ್ತ ಮುಸ್ಲಿಮ್ ಸಮುದಾಯ ಸಹ ಖಂಡಿಸುತ್ತಿದ್ದು, ಆರೋಪಿಗೆ ತಕ್ಕ ಶಿಕ್ಷೆ ಆಗಲೇಬೇಕು' ಎಂದು ಆಗ್ರಹಿಸಿದರು.
'ಪ್ರಕರಣ ಖಂಡಿಸಿ ಶುಕ್ರವಾರವೇ ಹುಬ್ಬಳ್ಳಿ ಅಂಜುಮನ್ ಸಂಸ್ಥೆಯಿಂದ ಪೊಲೀಸ್ ಕಮಿಷನರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಕೋರ್ಟ್ ರಚನೆ, ನ್ಯಾಯಾಧೀಶರನ್ನು ನೇಮಕ ಮಾಡಬೇಕು. ಅಲ್ಲಿ ಪ್ರಕರಣದ ವಿಚಾರಣೆ ನಡೆದು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇದು ರಾಜ್ಯಕ್ಕೇ ಮಾದರಿಯಾಗಬೇಕು' ಎಂದು ಒತ್ತಾಯಿಸಿದ್ದೇವೆ' ಎಂದು ಹೇಳಿದರು.
'ತನಿಖಾಧಿಕಾರಿಯಾಗಲಿ, ಸರ್ಕಾರವಾಗಲಿ ಈ ಪ್ರಕರಣದಲ್ಲಿ ಜಾತಿ, ಧರ್ಮ ಯಾವುದನ್ನೂ ತರಬಾರದು. ಆರೋಪಿಗೆ ಕಠಿಣ ಶಿಕ್ಷೆಯಾಗುವಲ್ಲಿ ನೋಡಿಕೊಳ್ಳಬೇಕು. ಹುಬ್ಬಳ್ಳಿ, ಧಾರವಾಡ ಭಾಗದ ಯಾವೊಬ್ಬ ಮುಸ್ಲಿಮ್ ವಕೀಲರು ಸಹ ಆರೋಪಿ ಪರ ವಾದ ಮಂಡಿಸಬಾರದು ಎಂದು ಮುತವಲ್ಲಿಗಳ ಸಮ್ಮುಖದಲ್ಲಿ ನಾವು ತೀರ್ಮಾನಿಸಿದ್ದೇವೆ. ಅದಕ್ಕೆ ವಕೀಲರು ಸಹ ಒಪ್ಪಿಗೆ ನೀಡಿದ್ದಾರೆ. ಆರೋಪಿಗೆ ಶಿಕ್ಷೆಯಾಗುವವರೆಗೂ ಸಮಸ್ತ ಮುಸ್ಲಿಮ್ ಸಮುದಾಯ ಹಿರೇಮಠ ಅವರ ಕುಟುಂಬದ ಜೊತೆಗೇ ಇರಲಿದೆ' ಎಂದು ಹಿಂಡಸಗೇರಿ ಹೇಳಿದರು.
ಮುಸ್ಲಿಮ್ ಧರ್ಮಗುರು ತಾಜುದ್ದೀನ್ ಖಾದ್ರಿ ಸೇರಿದಂತೆ, ಮುತವಲ್ಲಿಗಳು, ಮುಖಂಡರು ಇದ್ದರು.