ಹುಬ್ಬಳ್ಳಿ: ದೇಶದಲ್ಲಿ ಸಾಕಷ್ಟು ಕರಕುಶಲ ವಸ್ತುಗಳು ಉತ್ಪಾದನೆಯಿದ್ದರೂ, ಅವುಗಳನ್ನು ರಫ್ತು ಮಾಡುವಲ್ಲಿ ತೀರಾ ಹಿಂದುಳಿದಿದ್ದೇವೆ. ರಫ್ತು ಮಾಡಲು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ರಾಜ್ಯ ಲಘು ಉದ್ಯೋಗ ಭಾರತಿ ಪ್ರಧಾನ ಕಾರ್ಯದರ್ಶಿ ಕೆ.ನಾರಾಯಣ ಪ್ರಸನ್ನ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸೋಮವಾರ ಎಕ್ಸಿಮ್ ಬ್ಯಾಂಕ್ ವತಿಯಿಂದ ಕರಕುಶಲ ಅಭಿವೃದ್ಧಿ ಸಂವರ್ಧನ ಪರಿಷತ್(ಇಪಿಸಿಎಚ್) ಆಯೋಜಿಸಿದ್ದ ‘ರಫ್ತು ಅರಿವು ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
‘ಭಾರತಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಚಿಕ್ಕ ರಾಷ್ಟ್ರಗಳು ಕರಕುಶಲ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಜಾಗತಿಕವಾಗಿ 40 ಬಿಲಿಯನ್ ಕರಕುಶಲ ವಸ್ತು ವಹಿವಾಟು ನಡೆದರೆ, ಭಾರತದ ಪಾಲು ಕೇವಲ ಎರಡು ಬಿಲಿಯನ್ ಇದೆ. ಸಾಕಷ್ಟು ಅವಕಾಶವಿದ್ದರೂ ಹಿಂದುಳಿದಿದ್ದೇವೆ’ ಎಂದರು.
‘ಚನ್ನಪಟ್ಟಣ, ಬೈಲಹೊಂಗಲ, ಕಿನ್ನಾಳದ ಕರಕುಶಲ ವಸ್ತು ತಯಾರಕರಿಗೆ ಲಘು ಉದ್ಯೋಗ ಭಾರತಿಯಿಂದ ಪ್ರೋತ್ಸಾಹ ಮತ್ತು ತರಬೇತಿ ನೀಡಲಾಗುತ್ತಿದೆ. ಕರಕುಶಲ ವಸ್ತು ತಯಾರಕರು ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯಮ ಅಭಿವೃದ್ಧಿ ಪಡಿಸಬೇಕು’ ಎಂದರು.
‘ಕೈಗಾರಿಕೆಗಳಿಗೆ ಸಹಕಾರ ನೀಡಲಾಗುತ್ತದೆ. ಕರಕುಶಲ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಲು ಅಗತ್ಯವಿರುವ ಸಲಹೆ, ಸಹಕಾರ ಉಚಿತವಾಗಿ ದೊರೆಯಲಿವೆ. ಸಾಂಪ್ರದಾಯಿಕ ಮಾರ್ಗದಲ್ಲಿ ನಾವು ಈಗಿನ ಮಾರುಕಟ್ಟೆಯಲ್ಲಿ ಉದ್ಯಮ ಕಟ್ಟಿಕೊಳ್ಳಲು ಅಸಾಧ್ಯ. ಈ ನಿಟ್ಟಿನಲ್ಲಿ ಉದ್ಯಮಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಎಕ್ಸಿಮ್ ಬ್ಯಾಂಕ್ನ ಪೂರ್ಣಪ್ರಜ್ಞ ತಿಳಿಸಿದರು.
ಕರಕುಶಲ ವಸ್ತುಗಳ ರಫ್ತು ಕುರಿತು ಪ್ರೊ. ಪ್ರಸನ್ನ ವೆಂಕಟೇಶ ಮಾಹಿತಿ ನೀಡಿದರು. ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಕರಕುಶಲ ಅಭಿವೃದ್ಧಿ ಸಂವರ್ಧನ ಪರಿಷತ್ನ ವಿಭಾಗೀಯ ಮುಖ್ಯಸ್ಥೆ ಪಿ.ಎಲ್. ಶ್ರೀದೇವಿ ಇದ್ದರು.