ಹುಬ್ಬಳ್ಳಿ: ರಾಜ್ಯ ಸರ್ಕಾರ ಲಾಕ್ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿರುವುದರಿಂದ, ಹುಬ್ಬಳ್ಳಿ ಮತ್ತು ಧಾರವಾಡದ ನಡುವೆ ಸೋಮವಾರದಿಂದ (ಜೂನ್ 21) ಬಿಆರ್ಟಿಎಸ್ ಬಸ್ಗಳ ಕಾರ್ಯಾಚರಣೆ ಪುನರಾರಂಭವಾಗಲಿದೆ.
‘ಕೋವಿಡ್ ನಿಯಮ ಪಾಲನೆಯೊಂದಿಗೆ ಜನದಟ್ಟಣೆ ಮೇರೆಗೆ ಬಸ್ಗಳ ಕಾರ್ಯಾಚರಣೆ ಆರಂಭಿಸಲಾಗುವುದು. ಈಗಾಗಲೇ ಬಸ್ಗಳನ್ನು ಹಾಗೂ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸಿ, ಸೂಕ್ತ ಅಂತರ ಕಾಯ್ದುಕೊಂಡು ಪ್ರಯಾಣಿಸುವಂತೆ ನಿಯಮಗಳನ್ನು ಜಾರಿಗೆ ತರಲಾಗಿದೆ’ ಎಂದುವಿಭಾಗೀಯ ನಿಯಂತ್ರಣಾಧಿಕಾರಿವಿವೇಕಾನಂದ ವಿಶ್ವಜ್ಞ ತಿಳಿಸಿದ್ದಾರೆ.
‘ಆರಂಭದಲ್ಲಿ ಪ್ರತಿ ಬಸ್ನಲ್ಲಿ ಶೇ 50ರಷ್ಟು ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶವಿರಲಿದ್ದು, 10 ಬಿಆರ್ಟಿಎಸ್ ಮತ್ತು ಇತರ 20 ಬಸ್ಗಳನ್ನು ರಸ್ತೆಗಳಿಸಲಾಗುವುದು. ಪ್ರಯಾಣಿಕರ ದಟ್ಟಣೆ ಹೆಚ್ಚಾದರೆ ಮತ್ತಷ್ಟು ಬಸ್ಗಳನ್ನು ಬಿಡಲಾಗುವುದು’ ಎಂದು ಹೇಳಿದ್ದಾರೆ.
‘ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಹಾಗೂ ಆರ್ಟಿಪಿಸಿಆರ್ ಕೋವಿಡ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಹೊಂದಿರುವ ಚಾಲಕರು, ನಿರ್ವಾಹಕರು, ಪಾಸ್ ಆಪರೇಟರ್ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ನಗರ ಸಾರಿಗೆ ಒಂದನೇ ಘಟಕ ಹಾಗೂ ಧಾರವಾಡ ಬಿಆರ್ಟಿಎಸ್ ಘಟಕಗಳ ಸಿಬ್ಬಂದಿಗೆ ಕೋವಿಡ್ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.