ಹುಬ್ಬಳ್ಳಿ: ರೈಲ್ವೆ ಖಾಸಗೀಕರಣ ಕೈಬಿಡಬೇಕು ಮತ್ತು ಹುಬ್ಬಳ್ಳಿ –ಬೆಂಗಳೂರು ಮಧ್ಯೆ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ, ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ವತಿಯಿಂದ ನಗರದ ರೈಲು ನಿಲ್ದಾಣದ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಅಭಿಯಾನದ ಗಂಗಾಧರ ಬಡಿಗೇರ, ‘ಸಾಮಾನ್ಯ ಜನ ಪ್ರಯಾಣಕ್ಕೆ ರೈಲು ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ, ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣ ಮಾಡಬಾರದು. ಇದರಿಂದ ಈಗ ಸಿಗುತ್ತಿರುವ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಒತ್ತಾಯಿಸಿದರು.
‘ಕೋವಿಡ್ –19 ಬಿಕ್ಕಟ್ಟಿನ ಸಂದರ್ಭದಲ್ಲಿ ರೈಲ್ವೆ ಇಲಾಖೆಯು ನಿತ್ಯ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಿದೆ. ಪ್ಯಾಸೆಂಜರ್ಗಳನ್ನು ಎಕ್ಸ್ಪ್ರೆಸ್ಗಳನ್ನಾಗಿ ಪರಿವರ್ತಿಸಿದೆ. ಇದರಿಂದಾಗಿ ರೈಲುಗಳು ಸಂಚರಿಸುವ ಮಾರ್ಗದ ಪಟ್ಟಣಗಳಲ್ಲಿ ರೈಲುಗಳು ನಿಲ್ಲುವುದಿಲ್ಲ. ಇದರಿಂದ, ಹಲವರು ಪ್ರಯಾಣದಿಂದ ವಂಚಿತರಾಗುತ್ತಾರೆ’ ಎಂದರು.
ರಮೇಶ ಹೊಸಮನಿ ಮಾತನಾಡಿ, ‘ಸರ್ಕಾರ ರೈಲ್ವೆ ಖಾಸಗೀಕರಣವನ್ನು ಕೈಬಿಡದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಬಳಿಕ ನಿಲ್ದಾಣದ ಮ್ಯಾನೇಜರ್ ಮೂಲಕ, ರೈಲ್ವೆ ಸಚಿವರು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಹನಮೇಶ ಹುಡೇದ, ಮಹಾಂತೇಶ ಬೀಳೂರು, ಅರುಣ, ಇಮ್ರಾನ್ ಖಾನ್ ರಹೀಂಖಾನ್ ಇದ್ದರು.