ಹುಬ್ಬಳ್ಳಿ: ಇಂದು ಡಿಜಿ ಫೋಟೊ ಎಕ್ಸ್ಪೊ
ಹುಬ್ಬಳ್ಳಿ: ‘ಹುಬ್ಬಳ್ಳಿ ಫೋಟೋಗ್ರಾಫರ್ಸ್ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಷನ್ (ಎಚ್ಪಿವಿಎ), ಕರ್ನಾಟಕ ವಿಡಿಯೊಗ್ರಾಫರ್ಸ್ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಕೆವಿಪಿಎ) ಸಹಯೋಗದಲ್ಲಿ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮತ್ತು ಮಾರಾಟ ಮೇಳ ಡಿಜಿ ಫೋಟೊ ಎಕ್ಸ್ಪೊ ಫೆ. 4 ಮತ್ತು 5ರಂದು ಅಮರಗೋಳದ ಎಪಿಎಂಸಿ ಹುಬ್ಬಳ್ಳಿ ಧಾರವಾಡ ಮಲ್ಟಿಪರ್ಪಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಎಚ್ಪಿವಿಎ ಅಧ್ಯಕ್ಷ ಕಿರಣ ಬಾಕಳೆ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಫೆ.4ರಂದು ಬೆಳಿಗ್ಗೆ 10ಕ್ಕೆ ಉದ್ಯಮಿ ವಿಜಯ ಸಂಕೇಶ್ವರ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೇಯರ್ ಈರೇಶ ಅಂಚಟಗೇರಿ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಭಾಗವಹಿಸುವರು’ ಎಂದರು.
‘ಎರಡು ದಿನಗಳ ಮೇಳದಲ್ಲಿ ಬಗೆಬಗೆಯ ಕ್ಯಾಮೆರಾಗಳು, ಅತ್ಯುತ್ತಮ ಛಾಯಾಚಿತ್ರಗಳ ಪ್ರದರ್ಶನದ ಜೊತೆಗೆ, ಛಾಯಾಗ್ರಹಣ ಕ್ಷೇತ್ರದ ಹೊಸ ತಂತ್ರಜ್ಞಾನದ ಪರಿಚಯ ಹಾಗೂ ತರಬೇತಿಯನ್ನು ನೀಡಲಾಗುತ್ತಿದೆ. ಪ್ಯೂಜಿ ಫಿಲಂ, ನಿಕಾನ್, ಸೋನಿಡಿಜಿಟಲ್, ನ್ಯಾಶನಲ್, ಪ್ಯಾನಾಸೋನಿಕ್, ಮೊನಾರ್ಚ್ ವಿಡಿಯೊ, ಚಾಯ್ಸ್ ಎಚ್.ಡಿ, ಷಾಡೋ, ಸೈನ್ ಅಪ್ ಸೇರಿದಂತೆ ವಿವಿಧ ಕಂಪನಿಗಳ 70ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ’ ಎಂದು ತಿಳಿಸಿದರು.
ಛಾಯಾ ರತ್ನ ಪ್ರಶಸ್ತಿ: ‘ಮೇಳದ ಅಂಗವಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಆಯ್ದ ಹಿರಿಯ ಛಾಯಾಗ್ರಾಹಕರಿಗೆ ಉತ್ತರ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ನೀಡಲಾಗುವುದು. ಈ ಬಾರಿ ಹುಬ್ಬಳ್ಳಿಯ ಛಾಯಾಗ್ರಾಹಕರಾದ ನರಸಿಂಗಸಾ ಮೆಹರವಾಡೆ, ಷಣ್ಮುಖಸಾ ಪವಾರ, ಧಾರವಾಡದ ರವೀಂದ್ರ ಚಿಕ್ಕುಂಬಿ, ಬಿ.ಎಂ. ಕೇದಾರನಾಥ, ದಾವಣಗೆರೆಯ ಪಿ. ನಾಗರಾಜ್, ವಿಜಯನಗರದ ವಿರೂಪಾಕ್ಷಪ್ಪ, ಬೆಳಗಾವಿಯ ಅಶೋಕ ಎಸ್. ನಾಯಕ್, ಗದುಗಿನ ಸಾಹೇಬಗೌಡ ಎಸ್. ಗೌಡರ, ಕಾರವಾರದ ಉಲ್ಲಾಸ ರೇವಣಕರ, ಬಾಗಲಕೋಟೆಯ ಸಿ.ಬಿ. ಅನ್ನಂ ಹಾಗೂ ಹಾವೇರಿಯ ಕೃಷ್ಣರಾವ್ ಬಾಜಿರಾಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು.
ಕೆವಿಪಿಎ ಅಧ್ಯಕ್ಷ ಬೆಂಜಮಿನ್, ಎಚ್ಪಿವಿಎ ಪದಾಧಿಕಾರಿಗಳಾದ ದಿನೇಶ ದಾವಡೆ, ಕಾರ್ಯದರ್ಶಿ ರವೀಂದ್ರ ಕಾಟಿಗರ, ಖಜಾಂಚಿ ಅನಿಲ್ ತುರುಮರಿ, ವಿನಾಯಕ ಸಫಾರೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.