ಹುಬ್ಬಳ್ಳಿ: ‘ಪ್ರತಿ ಹೆಕ್ಟರ್ಗೆ ಬೆಳೆ ವಿಮೆ ಪರಿಹಾರ ₹25 ಸಾವಿರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 12ರಂದು ಬೆಂಗಳೂರು ಚಲೋ ರ್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ವಿವಿಧ ಜಿಲ್ಲೆಗಳ ರೈತರು ಹಾಗೂ ಸಂಘದ ಸದಸ್ಯರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಧಾರವಾಡ ಜಿಲ್ಲೆಯಿಂದ 2ಸಾವಿರ ಮಂದಿ ರೈತರು ತೆರಳಲಿದ್ದಾರೆ. ಅಧಿವೇಶನದ ದಿನದಂದೇ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ’ ಎಂದರು.
‘ಮಹದಾಯಿ ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ಸಾಕಷ್ಟು ಬಾರಿ ಪ್ರತಿಭಟನೆ, ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕಾಮಗಾರಿ ಆರಂಭಿಸದಿದ್ದರೆ ಹು– ಧಾ ಮಹಾನಗರ ಬಂದ್ ಮಾಡಲಾಗುವುದು. ಇದರ ಜೊತೆಗೆ ಅನೇಕ ನೀರಾವರಿ ಯೋಜನೆಗಳು ಸಹ ನನೆಗುದಿಗೆ ಬಿದ್ದಿವೆ. ರೈತರಿಗೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಕ್ರಮಕೈಗೊಳ್ಳಲು ಸಾಧ್ಯವಾಗದಿದ್ದರೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕ್ರಿಯಾಶೀಲ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.
ಮಲ್ಲಿಕಾರ್ಜುನ ಕುನ್ನೂರ, ಅನ್ನಪೂರ್ಣ ಪಾಟೀಲ, ಬಸಪ್ಪ ಸಂಬೋಜಿ, ಹಜರತ್ ಅಲಿ ಜೋಡಮನಿ, ಫಕೀರಪ್ಪ ಪೂಜಾರ ಇದ್ದರು.