ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಈಗಾಗಲೇ ಹೆಚ್ಚಿಸಿರುವ ಆಸ್ತಿ ಕರವನ್ನು ರದ್ದುಗೊಳಿಸದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಆಮ್ ಆದ್ಮಿ ಪಕ್ಷ ಎಚ್ಚರಿಸಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ, ಹತ್ತು ದಿನಗಳ ಹಿಂದೆ ಮನವಿ ಸಲ್ಲಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಆಸ್ತಿ ಕರ ಇಳಿಕೆಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಮೂರು ದಿನಗಳ ಒಳಗೆ ಇಳಿಕೆ ಮಾಡಿದಿದ್ದರೆ, ಹೋರಾಟ ಮಾಡಲಾಗುವುದು ಎಂದರು.
ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆಯ ಸೆಕ್ಷನ್ 107ರ ಪ್ರಕಾರ ಸರ್ಕಾರಕ್ಕೆ ತೆರಿಗೆ ಹೆಚ್ಚಳ ರದ್ದತಿ ಮಾಡುವ ಅಧಿಕಾರ ಇದೆ. ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಅವರು, ಕರ ಹೆಚ್ಚಳವನ್ನು ಸಮರ್ಥಿಸಿಕೊಂಡಿರುವುದು ದುರದೃಷ್ಟಕರ. ಅವರ ಪಕ್ಷದಲ್ಲಿಯೇ ಸಹಮತವಿಲ್ಲ. ಪಾಲಿಕೆಯ ಬಹಳಷ್ಟು ಮಾಜಿ ಸದಸ್ಯರೂ ಕೂಡ ತೆರಿಗೆ ಹಚ್ಚಳ ವಿರೋಧಿಸಿದ್ದಾರೆ. ಶೇ 5 ರಷ್ಟು ವಿನಾಯಿಸಿ ನೀಡಿರುವುದು ಸರಿಯಲ್ಲ. ಹೆಚ್ಚಳವನ್ನು ಸಂಪೂರ್ಣ ರದ್ದು ಮಾಡಬೇಕು ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಇದ್ದರಿಂದ ಸಾರ್ವಜನಿಕ ಹೋರಾಟ ಹಮ್ಮಿಕೊಂಡಿರಲಿಲ್ಲ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮುಖಂಡ ವಿಕಾಸ ಸೊಪ್ಪಿನ, ವಿವೇಕಾನಂದ ಸಾಲಿನ್ಸ್, ಪ್ರತಿಭಾ ದಿವಾಕರ ಇದ್ದರು.