ಹುಬ್ಬಳ್ಳಿ: ನಗರದ ಮೂರು ಸಾವಿರ ಮಠದ ಆವರಣದಲ್ಲಿ ಮೂರು ದಿನಗಳ 11ನೇ ಒಣ ಮೆಣಸಿನಕಾಯಿ ಮೇಳ ಶುಕ್ರವಾರ ಆರಂಭಗೊಂಡಿತು.
ಮೇಳಕ್ಕೆ ಚಾಲನೆ ನೀಡಿದ ಶಾಸಕ ಜಗದೀಶ ಶೆಟ್ಟರ್, ಮೇಳದಿಂದ ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗುತ್ತದೆ. ಕುಂದಗೋಳ, ಬ್ಯಾಡಗಿ ಭಾಗದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತದೆ. ಇಲ್ಲಿ ಬೆಳೆದ ಮೆಣಸಿನಕಾಯಿಗೆ ದೇಶದಾದ್ಯಂತ ಬೇಡಿಕೆ ಇದೆ. ಈ ಭಾಗದ ಉತ್ಪನ್ನಗಳನ್ನು ದೇಶದ ಮೂಲೆಮೂಲಗೆ ತಲುಪಿಸುವ ಕೆಲಸವನ್ನು ಸಾಂಬಾರು ಮಂಡಳಿ ಮಾಡಬೇಕು ಎಂದರು.
ಸಂಬಾರು ಪದಾರ್ಥಗಳ ಅಭಿವೃಧ್ಧಿ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ ಸಂಶಿ ಹಾಗೂ ಅಮರಗೋಳದ ಉಳುವ ಯೋಗಿ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ.
ಧಾರವಾಡ, ಹಾವೇರಿ, ಗದಗ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕುಗಳ ರೈತರು ಮೇಳದಲ್ಲಿ ಭಾಗವಹಿಸಿದ್ದು, ವಿವಿಧ ತಳಿಯ ಸುಮಾರು ನೂರು ಮಳಿಗೆಗಳು ಮೇಳದಲ್ಲಿವೆ.