ಹುಬ್ಬಳ್ಳಿ: ಜವಳಿ ಹಾಗೂ ಸಿದ್ಧ ಉಡುಪುಗಳ ಮೇಲಿನ ಜಿಎಸ್ಟಿಯನ್ನು ಶೇ 12ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ, ಜವಳಿ ಮತ್ತು ಅರಿವೆ ವ್ಯಾಪಾರಸ್ಥರ ಸಂಘದವರುನಗರದ ದುರ್ಗದ ಬೈಲ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಆರಂಭದಲ್ಲಿ ಉಡುಪುಗಳ ಮೇಲೆ ಶೇ 5ರಷ್ಟು ಜಿಎಸ್ಟಿ ವಿಧಿಸಿದ್ದ ಜಿಎಸ್ಟಿ ಮಂಡಳಿಯು, ಈಗ ಏಕಾಏಕಿ ಶೇ 12ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದರಿಂದ ಉದ್ಯಮ, ಮಾರಾಟಗಾರರು ಹಾಗೂ ಹಾಗೂ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ನಿಂದಾಗಿ ಉದ್ಯಮ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದೆ. ಮಾರಾಟಗಾರರು ಸಹ ತಮ್ಮಲ್ಲಿರುವ ಸರಕು ಮಾರಾಟವಾಗದೆ ಪರದಾಡಿದ್ದಾರೆ. ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಜಿಎಸ್ಟಿ ಏರಿಕೆ ಮಾಡಿದರೆ ಸಣ್ಣ ಉದ್ಯಮಿಗಳು ಹಾಗೂ ಮಾರಾಟಗಾರರು ಬೀದಿಗೆ ಬರಲಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದು, ಹಳೆಯ ತೆರಿಗೆಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕೈಗೆ ಕಪ್ಪುಪಟ್ಟಿ ಧರಿಸಿ ದುರ್ಗದ ಬೈಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವರ್ತಕರ, ಅಲ್ಲಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ಬಂದ ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.