ಹುಬ್ಬಳ್ಳಿ: ಸಿಐಡಿ ಅಧಿಕಾರಿಯೆಂದು ಹಳೇ ಹುಬ್ಬಳ್ಳಿಯ ಮಹಿಳೆಯೊಬ್ಬರಿಂದ ಹಣ ಪಡೆದು ವಂಚಿಸಿದ ಮೂವರು ಆರೋಪಿಗಳನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ, ಎರಡು ಮೊಬೈಲ್ ಮತ್ತು ಬುಲೆಟ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಹಳೇಹುಬ್ಬಳ್ಳಿ ಕೃಷ್ಣಾಪುರ ಓಣಿಯ ಚೇತನ ಹಡಪದ, ಲಿಂಗಸೂರಿನ ಪರಶುರಾಮಗೌಡ ಪಾಟೀಲ ಮತ್ತು ಗಂಗಾವತಿ ಕಾರಟಗಿಯ ಮಧು ಎಂ. ಬಂಧಿತರು.
ಹಳೇಹುಬ್ಬಳ್ಳಿ ಚೈತನ್ಯ ನಗರದ ಯಶೋಧಾ ಅವರಿಗೆ ಸಿಐಡಿ ಕ್ರೈಂ ಬ್ರ್ಯಾಂಚ್ ಪೋಲಿಸರು ಎಂದು ಸುಳ್ಳು ಹೇಳಿ, ಬೆದರಿಸಿ ಹಣ ಪಡೆದುಕೊಂಡಿದ್ದರು. ಈ ಕುರಿತು ಮಹಿಳೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ಕೈಗೊಂಡಿದ್ದ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದರು.