ಹುಬ್ಬಳ್ಳಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬುಧವಾರದಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ಸಾರ್ವಜನಿಕರಿಗೆ ಮಂಗಳವಾರ ಮಧ್ಯಾಹ್ನದಿಂದಲೇ ತಟ್ಟಿದೆ.
ಹುಬ್ಬಳ್ಳಿ ನಿಲ್ದಾಣದಿಂದ ಬೆಂಗಳೂರು, ಮಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ ದೂರದ ಊರುಗಳಿಗೆ ತೆರಳಬೇಕಿದ್ದ ಬಸ್ ಚಾಲಕರು ಹಾಗೂ ಕಂಡಕ್ಟರ್ ಕರ್ತವ್ಯಕ್ಕೆ ಬಂದಿಲ್ಲ. ಹಾಗಾಗಿ, ಆ ಮಾರ್ಗಗಳ ಬಸ್ ಸಂಚಾರ ಆರಂಭಿಸಿಲ್ಲ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 4,300 ಮಾರ್ಗಗಳಲ್ಲಿ ಸಂಚರಿಸಬೇಕಿದ್ದ ಬಸ್ಗಳ ಪೈಕಿ ಮಂಗಳವಾರ ಮಧ್ಯಾಹ್ನದಿಂದಲೇ 1,000ಕ್ಕೂ ಹೆಚ್ಚು ಮಾರ್ಗಗಳಲ್ಲಿ ಸಂಚರಿಸಬೇಕಿದ್ದ ಬಸ್ಗಳ ಸಂಚಾರ ರದ್ದುಗೊಳಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಬಸ್ ಸಂಚಾರ ಎಂದಿನಂತೆ ಇತ್ತು. ಮಧ್ಯಾಹ್ನದಿಂದ ಬಸ್ಗಳ ಸಂಚಾರ ಕಡಿಮೆಯಾಗುತ್ತಾ ಬಂದಿದೆ. ಪರಿಣಾಮ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ಗಳಿಗಾಗಿ ಪರದಾಡಬೇಕಾಯಿತು.
ರಾತ್ರಿ ಹೊರಡಬೇಕಿದ್ದ ಹಲವಾರು ಬಸ್ಗಳ ಸಂಚಾರವೂ ರದ್ದಾಗಿದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಗೊಂದಲಕ್ಕಿಡಾಗಿದ್ದಾರೆ.