ಧಾರವಾಡ: ‘ಹಸಿರಿಗೆ ಹೆಸರಾದ ಧಾರವಾಡದಲ್ಲಿ ಈಗ ಗಿಡ–ಮರಗಳ ಕೊರತೆ ಕಾಣುತ್ತಿದೆ. ಹಸಿರೀಕರಣ ನಿಟ್ಟಿನಲ್ಲಿ ಜುಲೈ 7 ವರೆಗೆ ವನಮಹೋತ್ಸವ ಸಪ್ತಾಹ ಹಮ್ಮಿಕೊಂಡಿದ್ದು, ಬೀಜ ಉಂಡೆಗಳ ಬಿತ್ತನೆ ಮೂಲಕ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಹಳಿಯಾಳ ರಸ್ತೆಯಲ್ಲಿನ ಉನ್ನತ ಶಿಕ್ಷಣ ಅಕಾಡೆಮಿ ಸಂಕೀರ್ಣದ ಆವರಣದಲ್ಲಿ ಸಸಿ ನೆಟ್ಟು ಜಿಲ್ಲಾಮಟ್ಟದ ವನಮಹೋತ್ಸವ ಸಪ್ತಾಹ ಹಾಗೂ ಕೋಟಿ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಅಧಿಕಾರಿಗಳು ಅರಣ್ಯ ಹೆಚ್ವಿಸಲು ಅಗತ್ಯ ಯೋಜನೆ ರೂಪಿಸಬೇಕು. ಜಮೀನು ಲಭ್ಯತೆ ಮೇಲೆ ಸಸಿಗಳನ್ನು ನೆಡಲು ಶಿಫಾರಸು ಮಾಡಬೇಕು. ಎಲ್ಲರೂ ಸೇರಿ ಮುಂದಿನ ವರ್ಷ ಕನಿಷ್ಠ 10 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸೋಣ ಎಂದರು.
ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾಲೇಜು ವಿದ್ಯಾರ್ಥಿನಿ ಕೀರ್ತಿ ನರಗುಂದ ಅವರು ಕೋಟಿ ವೃಕ್ಷ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪಾ ಟಿ.ಕೆ., ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶ ಕುಮಾರ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಯಶಪಾಲ್ ಕ್ಷೀರಸಾಗರ, ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಸಾದ, ಉಪಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ, ನೇಚರ್ ಫಸ್ಟ್ ಇಕೋ ವಿಲೇಜ್ ಮುಖ್ಯಸ್ಥ ಪಿ.ವಿ. ಹಿರೇಮಠ ಇದ್ದರು.
2.52 ಲಕ್ಷ ಸಸಿ ನೆಡುವ ಯೋಜನೆ ಅರಣ್ಯ ಪ್ರದೇಶಗಳಲ್ಲಿ ಖಾಲಿ ಇರುವ ಸ್ಥಳಗಳು ಅರಣ್ಯೇತರ ಸರ್ಕಾರಿ ಸ್ಥಳಗಳು ರಸ್ತೆ ಬದಿಗಳು ಶೈಕ್ಷಣಿಕ ಸಂಸ್ಥೆಗಳು ಆಸ್ಪತ್ರೆಗಳ ಆವರಣ ಕೈಗಾರಿಕಾ ಪ್ರದೇಶಗಳು ಧಾರ್ಮಿಕ ಸಂಘ–ಸಂಸ್ಥೆಗಳು ವಿಶ್ವ ವಿದ್ಯಾಲಯಗಳು ಸರ್ಕಾರಿ ಇಲಾಖೆಗಳ ಆವರಣಗಳು ರೈತರ ಜಮೀನುಗಳ ಬದುಗಳ ಮೇಲೆ ಮತ್ತು ಕೆರೆ ಅಂಗಳಗಳು ಸೇರ ಇತರೆ ಪ್ರದೇಶಗಳಲ್ಲಿ ಸ್ಥಳೀಯ ಗಿಡಗಳನ್ನು ಸಪ್ತಾಹದಲ್ಲಿ ನೆಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಯೋಜನೆ ಇದಾಗಿದೆ. ಜಿಲ್ಲೆಯ 145 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದ್ದು ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ 2.52 ಲಕ್ಷಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.