ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಜನತಾ ಬಜಾರ್ ಹೊಸದಾಗಿ ನಿರ್ಮಾಣವಾಗಲಿರುವ ಕಾರಣ ಅಲ್ಲಿನ ವ್ಯಾಪಾರಸ್ಥರನ್ನು ಗಿರಣಿ ಚಾಳ ಸಮೀಪದಲ್ಲಿರುವ ಭಾರತ್ ಮಿಲ್ನ ಖಾಲಿ ಜಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ₹18.36 ಕೋಟಿ ವೆಚ್ಚದ ಹೊಸ ಮಾರುಕಟ್ಟೆ ನಿರ್ಮಾಣ ಯೋಜನೆ ಇದಾಗಿದ್ದು, 15 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದೆ. ಆದರೆ, ವ್ಯಾಪಾರಿಗಳ ಸ್ಥಳಾಂತರ ತಡವಾಗಿದ್ದರಿಂದ ಕಾಮಗಾರಿ ವಿಳಂಬವಾಗಿದೆ.
ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಐದು ದಿನಗಳ ಹಿಂದೆ ನಡೆದಿದ್ದ ಸ್ಮಾರ್ಟ್ ಸಿಟಿ ಸಲಹಾ ಸಮಿತಿಯ ಸಭೆಯಲ್ಲಿ ಆದಷ್ಟು ಬೇಗನೆ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ವ್ಯಾಪಾರಿಗಳ ಜೊತೆ ಸಭೆ ನಡೆಸಿದರು.
ಭಾರತ್ ಮಿಲ್ನ ಜಾಗದಲ್ಲಿ ವ್ಯಾಪಾರಿಗಳಿಗೆ ಶೆಡ್ ಹಾಕಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ನಿಗದಿತ ಅವಧಿಯ ಒಳಗೆ ಜನತಾ ಬಜಾರ್ ಕಾಮಗಾರಿ ಪೂರ್ಣಗೊಳಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವ್ಯಾಪಾರಸ್ಥರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ ಇಟ್ನಾಳ ‘ಒಂದು ತಿಂಗಳಲ್ಲಿ ಭಾರತ್ ಮಿಲ್ ಜಾಗದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಡಲಾಗುವುದು. ಕೊರೊನಾ ಲಾಕ್ಡೌನ್ ಕಾರಣದಿಂದ ಕಾಮಗಾರಿ ಆರಂಭವಾಗುವುದು ತಡವಾಗಿದೆ. ಬೇಗನೆ ಕಾಮಗಾರಿ ಆರಂಭಿಸಲು ನಿಮ್ಮೆಲ್ಲರ ಸಹಕಾರ ಅಗತ್ಯ’ ಎಂದರು.
ಪಾಲಿಕೆಯ ಸಹಾಯಕ ಆಯುಕ್ತ ಅಜಿತ್ ದೇಸಾಯಿ, ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ಎಂ. ನಾರಾಯಣ, ವ್ಯಾಪಾರಸ್ಥರ ಸಂಘದ ಪ್ರಮುಖರಾದ ಪ್ರೇಮನಾಥ ಚಿಕ್ಕತುಂಬಳ, ರಫೀಕ್ ಮುಜಾವರ, ನಾರಾಯಣ, ವಾಲ್ಮೀಕಿ, ರಾಘವೇಂದ್ರ ತಾಂಬ್ರೆ ಇದ್ದರು.