ಹುಬ್ಬಳ್ಳಿ: ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಅನುಷ್ಠಾನಕ್ಕೆ ತರುತ್ತಿದ್ದು, ಇದರಲ್ಲಿ ಹಿಂದಿ ಜೊತೆಗೆ ಸ್ಥಳೀಯ ಭಾಷೆ ಕಲಿಕೆಗೂ ಆದ್ಯತೆ ಸಿಗಲಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಹೇಳಿದರು.
ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಅಪಾರ’ ಎಂದರು.
‘ಕಾನೂನು ವಿಶ್ವವಿದ್ಯಾಲಯಕ್ಕೆ ಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ವಿಶ್ವವಿದ್ಯಾಲಯ ಸುಧಾರಣೆ ಕುರಿತು ಸಿಂಡಿಕೇಟ್ ಸದಸ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು. ಇವುಗಳ ಕುರಿತು ಸರ್ಕಾರಕ್ಕೆ ಲಿಖಿತವಾಗಿ ಬರೆದು ಬಗೆಹರಿಸುವ ಪ್ರಯತ್ನ ಮಾಡುವುದಾಗಿ’ ಭರವಸೆ ನೀಡಿದರು.
ಸಂವಾದದಲ್ಲಿ ಮಾತನಾಡಿದ ವಿದ್ಯಾರ್ಥಿ ಪ್ರಭೋಯನ್ ಚಕ್ರಬೋರ್ಟಿ ‘ಅಣುಕು ನ್ಯಾಯಾಲಯ ಕಲ್ಪನೆ ವಿದ್ಯಾರ್ಥಿಗಳಗೆ ಅನುಕೂಲವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಕಾನೂನು ಜ್ಞಾನ ಲಭಿಸುತ್ತಿದೆ’ ಎಂದರು. ವಿದ್ಯಾರ್ಥಿನಿ ಸಿದ್ಧಿ ನಾಗವೇಕರಿ ನೂತನ ಶಿಕ್ಷಣ ನೀತಿಯಲ್ಲಿನ ತ್ರಿಭಾಷ ಕಲಿಕೆಯ ಅನುಕೂಲತೆಗಳ ಬಗ್ಗೆ ವಾದಿಸಿದರು.
ಸಂವಾದದ ಆರಂಭದಲ್ಲಿ ಥಾವರ್ಚಂದ್ ಗೆಹಲೋತ್ ಅವರು ‘ನಾನು ಮಧ್ಯಪ್ರದೇಶದವನು, ಹಿಂದಿ ಭಾಷಿಕ. ಕರ್ನಾಟಕಕ್ಕೆ ಬಂದ ಮೇಲೆ ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದೇನೆ’ ಎಂದರು.
ಕಾನೂನು ವಿ.ವಿ. ಕುಲಪತಿ ಪ್ರೊ. ಪಿ. ಈಶ್ವರ ಭಟ್, ರಿಜಿಸ್ತ್ರಾರ್ ಮಹಮದ್ ಜುಬೇರ್, ಕುಲಸಚಿವೆ ರತ್ನ ಭರಮಗೌಡರ್, ನೋಂದಣಿ ಹಾಗೂ ಮೌಲ್ಯಮಾಪನ ವಿಭಾಗದ ಪ್ರೊ. ಜಿ.ಬಿ. ಪಾಟೀಲ, ಸಿಂಡಿಕೇಟ್ ಸದಸ್ಯರಾದ ಮಹೇಶ್ ಒಡೆಯರ, ಗಿರಿಜಾ ಹಿರೇಮಠ, ಚಂದ್ರಮೋಹನ್ ಕಾಳೆ ಇದ್ದರು.