ನವಲಗುಂದ: ಹಿಂದು ಮುಸ್ಲಿಂ ಭಾವೈಕ್ಯ ಸಂಗಮವಾದ ತಾಲೂಕಿನ ಯಮನೂರು ಗ್ರಾಮದ ಜಾಂಗದೇವ ಊರ್ಫ್ ರಾಜಾಭಾಗ ಸವಾರರ ಜಾತ್ರಾ ಮಹೋತ್ಸವ ಶುಕ್ರವಾರ ಗಂಧಾಭಿಷೇಕದೊಂದಿಗೆ ಲಕ್ಷಾಂತರ ಭಕ್ತರ ನಡುವೆ ವೈಭವದೊಂದಿಗೆ ಆರಂಭಗೊಂಡಿತು.
ಶುಕ್ರವಾರ ಗಂಧಾಭಿಷೇಕ ಹಾಗೂ 30 ರಂದು ಉರುಸ್ ಇರುವ ನಿಮಿತ್ತ ರಾಜ್ಯವಲ್ಲದೇ ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಚಾಂಗದೇವರ ದರ್ಶಕ್ಕೆ ಆಗಮಿಸಿದ್ದರು. ಚಾಂಗದೇವರು ನಮಗೆ ಒಳ್ಳೆಯದನ್ನು ಮಾಡಲಿ. ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲಿ. ಈ ವರ್ಷ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಭಕ್ತರು ಪ್ರಾರ್ಥಿಸಿದರು.
ಗಂಧಾಭಿಷೇಕಕ್ಕೆ ಸಂಬಂಧಿಸಿದಂತೆ ಬರ್ಗೆ ಮನೆತನ ಸಂತರು ಚಾಂಗದೇವನಿಗೆ ದೀಪ ಹಚ್ಚಲು ಬೆಣ್ಣಿ ಹಳ್ಳಕ್ಕೆ ನೀರು ತರಲು ಹೊರಡುವ ಸಮಯದಲ್ಲಿ ರಸ್ತೆಯ ಮೇಲೆ ಭಕ್ತರು ಬೆನ್ನು ಮೇಲಾಗಿ ಮಲಗಿದರು. ಸಂತರ ಪಾದ ಸ್ಪರ್ಶದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದರು.
ಬೆಣ್ಣಿಹಳ್ಳದಿಂದ ತಂದ ನೀರಿನಿಂದ ಗರ್ಭಗುಡಿಯಲ್ಲಿ ಸಂತರು ದೀಪ ಹಚ್ಚುತ್ತಿದಂತೆ ಭಕ್ತರು ರೋಮಾಂಚನಗೊಂಡರು. ಹಿಂದೂ-ಮುಸ್ಲಿಂ ಭಾವೈಕ್ಕೆಕ್ಕೆ ಸಾಕ್ಷಿಯಾದ ಚಾಂಗದೇವರ ದೇವಸ್ಥಾನಲ್ಲಿ ಪೂಜೆ ಹಾಗೂ ಫಾತಿಹಾ(ಓದಿಕೆ) ಏಕಕಾಲಕ್ಕೆ ನಡೆಯಿತು.
ಹೈದರಾಬಾದ್ ಕರ್ನಾಟಕ ಭಾಗದ ಭಕ್ತರು ಜಾತ್ರೆಯಲ್ಲಿ ಹೆಚ್ಚಾಗಿದ್ದರು. ಆಂಧ್ರದ ಗಡಿಭಾಗದ ಜಿಲ್ಲೆ ಹಾಗೂ ಮಹಾರಾಷ್ಟ್ರದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.