ಹದಿನೈದು ವರ್ಷಗಳ ಹಿಂದೆ ಚಂದ್ರಣ್ಣ, ಮಹಾಂತೇಶ, ಮಲ್ಲಿಕಾರ್ಜುನ ಹಾಗೂ ಶಿವಾನಂದ ಎಂಬ ನಾಲ್ಕು ಮಕ್ಕಳೊಂದಿಗೆ ಪಟ್ಟಣಕ್ಕೆ ಬಂದ ಈಶ್ವರಪ್ಪ ನಾವಿ ಅವರು ಪಟ್ಟಣದಲ್ಲಿ ಮಹಾಂತೇಶ ಸ್ವೀಟ್ ಮಾರ್ಟ್ ಹಾಗೂ ಮಹಾಂತೇಶ ಬೇಕರಿ ತೆರೆದರು. ಚಂದ್ರಣ್ಣ ಹಾಗೂ ಮಹಾಂತೇಶ ಕೇರಳದ ಕೊಚ್ಚಿ ಸೇರಿದಂತೆ ಹಲವೆಡೆ ಬೇಕರಿ ಉದ್ಯಮದಲ್ಲಿ ತರಬೇತಿ ಪಡೆದು ಬಂದಿದ್ದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ರುಚಿಯಾದ ತಿನಿಸುಗಳನ್ನು ಪೂರೈಸಲು ಸಾಧ್ಯವಾಯಿತು. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ, ಗುಣಮಟ್ಟದ ಉತ್ಪನ್ನಗಳನ್ನು ನೀಡಿದ್ದರಿಂದ ಇವರ ಬೇಕರಿ ಗ್ರಾಹಕರ ಮೆಚ್ಚುಗೆ, ವಿಶ್ವಾಸ ಗಳಿಸಿತು.