ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2023: ಕಪ್ಪತಗುಡ್ಡಕ್ಕೆ ಬೇಕಿದೆ ಸಂಶೋಧನೆ

Published 6 ಜುಲೈ 2023, 6:11 IST
Last Updated 6 ಜುಲೈ 2023, 6:11 IST
ಅಕ್ಷರ ಗಾತ್ರ

ಗದಗ: ರಜತ ಮಹೋತ್ಸವದ ಸಂಭ್ರಮದಲ್ಲಿರುವ ಗದಗ ಕೃಷಿ ಪ್ರಧಾನ ಜಿಲ್ಲೆ. ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಕೃಷಿ, ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಉತ್ತೇಜನಕ್ಕೆ ನೆರವಾಗುವಂತಹ ಯೋಜನೆಗಳು ಪ್ರಕಟ ಆಗಬೇಕು ಎಂಬುದು ಜಿಲ್ಲೆಯ ಜನರ ಆಶಯವಾಗಿದೆ.

ಗದಗ ಜಿಲ್ಲೆ ನೇಕಾರಿಕೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಸಿದ್ಧವಾಗುವ ಉತ್ಪನ್ನಗಳು ರಾಜ್ಯ ಹಾಗೂ ದೇಶದ ವಿವಿಧೆಡೆಗೆ ರಫ್ತಾಗುತ್ತವೆ. ಜಿಲ್ಲೆಯ ನೇಕಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಬೇಕು ಎಂಬುದು ನೇಕಾರರ ಹಲವು ವರ್ಷಗಳ ಬೇಡಿಕೆಯಾಗಿದೆ. ಅದೇರೀತಿಯಾಗಿ ರೈತ ಸ್ನೇಹಿ, ಪರಿಸರ ಸ್ನೇಹಿ ಉದ್ಯಮ ರೂಪಿಸಿ, ರೈತರಿಗೆ ಉತ್ತಮ ಬೆಲೆದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಫುಡ್‌ ಪಾರ್ಕ್‌ ನಿರ್ಮಿಸಬೇಕು ಎಂಬುದು ಜನರ ಆಶಯವಾಗಿದೆ.

‘ಗದಗ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡುವ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು. ಕೃಷಿ ಆಧರಿತ ಕೈಗಾರಿಕೆಗಳು, ಸಾಫ್ಟ್‌ವೇರ್‌ ಕಂಪನಿಗಳು ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸಿಕೊಡುತ್ತವೆ. ಆದಕಾರಣ, ಈ ಬಾರಿಯ ಬಜೆಟ್‌ನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು’ ಎನ್ನುತ್ತಾರೆ ವಕೀಲ ರವಿಕಾಂತ ಅಂಗಡಿ.

‘ಗದಗ ಜಿಲ್ಲೆಯಾಗುವುದಕ್ಕೂ ಮುನ್ನ ಪರಿಸರ ಸ್ನೇಹಿ ಕೈಗಾರಿಕೋದ್ಯಮದಲ್ಲಿ ಶ್ರೀಮಂತವಾಗಿತ್ತು. ಎಣ್ಣೆ ಹಾಗೂ ಹತ್ತಿ ಸಂಬಂಧಿಸಿದ ಉದ್ಯಮ ಉತ್ತುಂಗದಲ್ಲಿದ್ದವು. ಎಪಿಎಂಸಿಯಲ್ಲಿ ವಹಿವಾಟು ಜೋರಾಗಿತ್ತು. ನೇಕಾರಿ

ಕೆಯೂ ಉತ್ತಮ ಸ್ಥಿತಿಯಲ್ಲಿತ್ತು. ಈಗ ಈ ಎಲ್ಲ ಉದ್ಯಮಗಳು ನಾನಾ ಕಾರಣಗಳಿಂದ ಬಂದ್‌ ಆಗಿವೆ. ಇವುಗಳ ಪುನಶ್ಚೇತನ ಆಗಬೇಕು. ಇದರಿಂದ ಜನರ ವಲಸೆ ಕೂಡ ತಡೆಗಟ್ಟಬಹುದು. ಜಿಲ್ಲೆಯ ಕೃಷಿ ಅಭಿವೃದ್ಧಿಗೆ ನೆರವಾಗುವಂತಹ ಯೋಜನೆಗಳು ಘೋಷಣೆ ಆಗಬೇಕು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅವರು. ‘ಕಪ್ಪತ್ತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆ ಆಗಿದ್ದು ಅಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ಇದೆ. ಅಲ್ಲಿ ಔಷಧೀಯ ಸಸ್ಯಗಳ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಬೇಕು’ ಎಂದು ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಕಪ್ಪತ್ತಗುಡ್ಡದಲ್ಲಿ ಸಸ್ಯ ಹಾಗೂ ವನ್ಯಜೀವಿ ಸಂಪತ್ತು ವೃದ್ಧಿಸುತ್ತಿದೆ. ಮಾನವ ಹಸ್ತಕ್ಷೇಪ ಕಡಿಮೆ ಇದೆ. ಆದರೂ, ಕಪ್ಪತ್ತಗುಡ್ಡಕ್ಕೆ ಕಾವಲು ಹೆಚ್ಚಿಸಬೇಕು.

ಬೇಸಿಗೆ ಕಾಲದಲ್ಲಿ ಕಾಡಿಗೆ ಬೆಂಕಿ ಹಚ್ಚುವವರಿಗೆ ಕಡಿವಾಣ ಹಾಕಲು ಕಠಿಣ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT