ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ನರೇಗಲ್ ಹೋಬಳಿಯ ಮಾರ್ಗದ ರಸ್ತೆ ಬದಿಯ ಎರಡೂ ಕಡೆಗಳಲ್ಲಿ ಮುಳ್ಳಿನ ಕಂಟಿಗಳು ರಸ್ತೆಗೆ ಚಾಚಿಕೊಂಡು ಅಪಘಾತಕ್ಕೆ ಆಹ್ವಾನಿಸುತ್ತಿದ್ದವು. ಗಿಡದ ಟೊಂಗೆಗಳು ರಸ್ತೆ ಮಧ್ಯಭಾಗದವರೆಗೂ ಚಾಚಿಕೊಂಡಿದ್ದು, ಇದರಿಂದಾಗಿ ಎದುರಿಗೆ ಬರುವ ವಾಹನಗಳ ಕಾಣಿಸದಿರುವುದರಿಂದ ಅಪಘಾತಗಳು ನಡೆಯುತ್ತಿದ್ದವು. ಮಾರನಬಸರಿ-ನರೇಗಲ್, ಮಾರನಬಸರಿ ಕಳಕಾಪುರ, ಜಕ್ಕಲಿ-ಮಾರನಬಸರಿ, ಬೂದಿಹಾಳ-ನರೇಗಲ್ ಮಾರ್ಗದ ಗ್ರಾಮೀಣ ಭಾಗದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಂಗೆಗಳು ರಸ್ತೆಗೆ ಚಾಚಿಕೊಂಡಿವೆ. ಈಗಲೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ನಡೆದಿರುವ ಕಾರ್ಯವನ್ನು ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೂ ವಿಸ್ತರಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.