ಮುಂಡರಗಿ: 'ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದ್ದಾರೆ. ಅವರನ್ನು ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ವದಂತಿ ತೀವ್ರವಾಗಿ ಹರಡಿದ್ದು, ಕಾಂಗ್ರೆಸ್ ವರಿಷ್ಠರು ಯಾವ ಕಾರಣಕ್ಕೂ ಅವರನ್ನು ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದು' ಎಂದು ತಾಲ್ಲೂಕು ಮಾದಿಗ ಸಮುದಾಯದ ಮುಖಂಡ ದುರುಗಪ್ಪ ಹರಿಜನ ಆಗ್ರಹಿಸಿದರು.
ತಾಲ್ಲೂಕು ಮಾದಿಗ ಸಮುದಾಯದ ಕಾರ್ಯಕರ್ತರು ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಆದೇಶವನ್ನು ಧಿಕ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರನ್ನು ಈಗಾಗಲೆ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ’ ಎಂದು ತಿಳಿಸಿದರು.
ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಾದಿಗ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಅವರು ಬೆಂಬಲಿಸುವ ಪಕ್ಷದ ಅಭ್ಯರ್ಥಿಯು ಇಲ್ಲಿ ಗೆಲುವು ಸಾಧಿಸುತ್ತಾರೆ. ಆದ್ದರಿಂದ ಪಕ್ಷದಿಂದ ಉಚ್ಚಾಟನೆಗೊಂಡ ರಾಮಕೃಷ್ಣ ದೊಡ್ಡಮನಿ ಅವರನ್ನು ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಸೇರಿಸಿಕೊಂಡರೆ ಲೋಕಸಭಾ ಚುನಾವಣೆಯಲ್ಲಿ ಗದಗ-ಹಾವೇರಿ ಜಿಲ್ಲೆಯಾದ್ಯಂತ ಮಾದಿಗ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾದಿಗ ಸಮುದಾಯದ ಮುಖಂಡ ಲಕ್ಷ್ಮಣ ತಗಡಿನಮನಿ, ಡಂಬಳ ಗ್ರಾ.ಪಂ.ಸದಸ್ಯ ಮರಿಯಪ್ಪ ಸಿದ್ದಣ್ಣವರ ಮಾತನಾಡಿದರು.