ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಮೂರು ದಶಕಗಳ ಹಿಂದೆ ಆರಂಭಗೊಂಡಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ತಾಲ್ಲೂಕಿನ ಬಿದರಳ್ಳಿ, ಗುಮ್ಮಗೋಳ ಹಾಗೂ ವಿಠಲಾಪುರ ಗ್ರಾಮಗಳು ಮುಳುಗಡೆಯಾಗಿವೆ. ಆದರೆ, ಮುಳುಗಡೆ ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಉದ್ದೇಶದಿಂದ ಸರ್ಕಾರ ನಿರ್ಮಿಸಿರುವ ನೂತನ ಗ್ರಾಮಗಳು ರಸ್ತೆ, ಚರಂಡಿ, ನೀರು ಮೊದಲಾದ ಅಗತ್ಯ ಸೌಲಭ್ಯಗಳಿಂದ ವಂಚಿತಗೊಂಡಿದ್ದು, ಮೂಲಸೌಲಭ್ಯಗಳಿಲ್ಲದೇ ಅಲ್ಲಿಯ ಜನರು ನಿತ್ಯ ಪರದಾಡುವಂತಾಗಿದೆ.
ಮುಳಗಡೆಯಾಗುವ ಮೂರು ಗ್ರಾಮಗಳ ಸ್ಥಳಾಂತರ ಕಾರ್ಯವು ಆಮೆಗತಿಯಲ್ಲಿ ಸಾಗಿದ್ದು ನೂತನ ಗ್ರಾಮಗಳಿಗೆ ನೀರು, ರಸ್ತೆ, ಚರಂಡಿ, ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕಾರಣದಿಂದ ಹಳೆ ಗ್ರಾಮಗಳಿಂದ ನೂತನ ಗ್ರಾಮಗಳಿಗೆ ಸ್ಥಳಾಂತಗೊಳ್ಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.
ತುಂಗಭದ್ರಾ ನದಿಗೆ ಅಡ್ಡಲಾಗಿ ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ ಗರಿಷ್ಠ 3 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿಕೊಳ್ಳಬಹುದಾಗಿದೆ. ಆದರೆ, ಅಷ್ಟು ನೀರನ್ನು ಬ್ಯಾರೇಜ್ನಲ್ಲಿ ಸಂಗ್ರಹಿಸಿದರೆ ಮೂರೂ ಗ್ರಾಮಗಳು ಮುಳುಗಡೆಯಾಗುತ್ತವೆ. ಈ ಕಾರಣದಿಂದ ನಿಗದಿತ ಪ್ರಮಾಣದ ನೀರನ್ನು ಬ್ಯಾರೇಜ್ನಲ್ಲಿ ಸಂಗ್ರಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮಗಳನ್ನು ಸ್ಥಳಾಂತರಿಸದೆ ಇರುವುದರಿಂದ ಸದ್ಯ ಬ್ಯಾರೇಜ್ನಲ್ಲಿ 1 ಟಿಎಂಸಿ ಅಡಿ ನೀರನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ.
ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಗುಮ್ಮಗೋಳ ಗ್ರಾಮವು ಏತ ನೀರಾವರಿ ಯೋಜನೆಗೆ ತುಂಬಾ ಹತ್ತಿರದಲ್ಲಿದ್ದು, ಬ್ಯಾರೇಜ್ನಲ್ಲಿ 3 ಟಿಎಂಸಿ ಅಡಿ ನೀರು ಸಂಗ್ರಹವಾದರೆ ಗ್ರಾಮವು ಸಂಪೂರ್ಣವಾಗಿ ಮುಳುಗಡೆಯಾಗುತ್ತದೆ. ಗ್ರಾಮದ ಸ್ಥಳಾಂತರಕ್ಕೆ ಸರ್ಕಾರವು ಹಮ್ಮಿಗಿ ಗ್ರಾಮದ ಹೊರವಲಯದಲ್ಲಿ 16.9.2010ರಲ್ಲಿ 35 ಎಕರೆ ಜಮೀನನ್ನು ಗುರುತಿಸಿತು. ಗ್ರಾಮ ಸ್ಥಳಾಂತರದ ಭೂಸ್ವಾಧೀನ ಹಾಗೂ ಮತ್ತಿತರ ವೆಚ್ಚಗಳಿಗಾಗಿ ₹7,93 ಕೋಟಿ (₹7,93,14,586) ಹಣವನ್ನು ಮಂಜೂರು ಮಾಡಲಾಯಿತು.
ನೂತನ ಗುಮ್ಮಗೋಳ ಗ್ರಾಮದಲ್ಲಿ ನಿಯಮಾನುಸಾರ ಸರ್ಕಾರವು ರಸ್ತೆ, ಚರಂಡಿ ಮೊದಲಾದವುಗಳನ್ನು ಕಾಟಾಚಾರಕ್ಕೆ ನಿರ್ಮಿಸಿ,ಮೇ 29,2017ರಂದು ಗ್ರಾಮಸ್ಥರಿಗೆ ನಿವೇಶನಗಳ ಹಕ್ಕುಪತ್ರಗಳನ್ನು ನೀಡಿತು. ಆದರೆ ಗ್ರಾಮವು ಹಳೆಗ್ರಾಮದಿಂದ ತುಂಬಾ ದೂರ ಹಾಗೂ ಅರಣ್ಯ ಪ್ರದೇಶದ ಹತ್ತಿರವಿದ್ದುದ್ದರಿಂದ ಗ್ರಾಮಸ್ಥರು ನೂತನ ಗ್ರಾಮಕ್ಕೆ ಹೋಗಲು ಹಿಂದೇಟು ಹಾಕತೊಡಗಿದ್ದಾರೆ. ನೂತನ ಗ್ರಾಮವು ಈಗ ಬೃಹತ್ ಗಿಡ ಗಂಟೆಗಳಿಂದ ಆವೃತ್ತವಾಗಿದ್ದು, ಸರ್ಕಾರ ನಿರ್ಮಿಸಿದ್ದ ರಸ್ತೆ, ಚರಂಡಿ ಮೊದಲಾದವುಗಳೆಲ್ಲ ಸಂಪೂರ್ಣವಾಗಿ ನಾಶವಾಗಿವೆ. ಈಗ ಅಲ್ಲಿ ಯಾವುದೇ ಮೂಲಸೌಲಭ್ಯಗಳು ಇಲ್ಲವಾದ್ದರಿಂದ ಗ್ರಾಮಸ್ಥರು ನೂತನ ಗ್ರಾಮಕ್ಕೆ ತೆರಳಲು ನಿರಾಕರಿಸುತ್ತಿದ್ದಾರೆ.
ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಈ ಹಿಂದೆ ನೀಡಿದ್ದ ಪರಿಹಾರವೆಲ್ಲ ಈಗ ಅನ್ಯಕಾರ್ಯಗಳಿಗೆ ಖರ್ಚಾಗಿದ್ದು, ಸರ್ಕಾರವೇ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಬಹುತೇಕ ಗ್ರಾಮಸ್ಥರು ಈಗಲೂ ಹಳೆ ಗುಮ್ಮಗೋಳ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಮನೆಗಳಿಲ್ಲದ ಕೆಲ ಬಡ ಕುಟುಂಬಗಳು ಹಲವು ವರ್ಷಗಳಿಂದ ನೂತನ ಗುಮ್ಮಗೋಳ ಗ್ರಾಮದಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ.
ನೂತನ ಗುಮ್ಮಗೋಳ ಗ್ರಾಮದಲ್ಲಿ ನಿರ್ಮಿಸಿದ್ದ ಗುಡಿಗಳು, ಬಸ್ ನಿಲ್ದಾಣ, ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರ ಮೊದಲಾದವುಗಳು ಸಂಪೂರ್ಣವಾಗಿ ಹಾಳಾಗಿವೆ. ನೂತನ ಗ್ರಾಮದಲ್ಲಿ ವಾಸಿಸಲು ಅಗತ್ಯ ಸೌಲಭ್ಯಗಳಿಲ್ಲದ್ದರಿಂದ ಗುಮ್ಮಗೋಳ ಗ್ರಾಮಸ್ಥರು ಅತಂತ್ರರಾಗಿದ್ದು, ಸೂಕ್ತ ಸೌಲಭ್ಯ ಕಲ್ಪಿಸುಲು ಆಗ್ರಹಿಸಿ ಹಲವಾರು ಬಾರಿ ಪಟ್ಟಣದಲ್ಲಿ ಪ್ರತಿಭಟನೆಯನ್ನೂ ಮಾಡಿದ್ದಾರೆ. ಆದರೂ ಅವರ ಸಮಸ್ಯೆಗಳು ಬಗೆಹರಿದಿಲ್ಲ.
ಹಿನ್ನೀರಿನಲ್ಲಿ ಮುಳುಗಡೆಯಾಗುವ ಬಿದರಳ್ಳಿ ಗ್ರಾಮವು ತುಂಗಭದ್ರಾ ನದಿಯ ಪಕ್ಕದಲ್ಲಿದ್ದು, ಗ್ರಾಮದ ಸ್ಥಳಾಂತರಕ್ಕೆ ಡಿ.19,2012ರಲ್ಲಿ ಗ್ರಾಮದ ಹೊರವಲಯದಲ್ಲಿ 85 ಎಕರೆ ಜಮೀನು ಖರೀದಿಸಲಾಯಿತು. ಆದರೆ ಸಮರ್ಪಕವಾದ ಮೂಲ ಸೌಲಭ್ಯಗಳನ್ನು ನಿರ್ಮಿಸದೆ ಮಾ.12, 2015ರಂದು ಗ್ರಾಮಸ್ಥರಿಗೆ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಯಿತು. ನೂತನ ಗ್ರಾಮಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಾಟಾಚಾರಕ್ಕೆ ನಿರ್ಮಿಸಲಾಗಿದ್ದು, ನೂತನ ಗ್ರಾಮದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಈಗ ಮೂಲ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ.
ನೂತನ ಬಿದರಳ್ಳಿ ಗ್ರಾಮಕ್ಕೆ ಈಗಲೂ ಬಸ್ ಸಂಪರ್ಕವಿಲ್ಲದ್ದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸೂಕ್ತ ರಸ್ತೆ, ಚರಂಡಿಗಳಿಲ್ಲದೆ ಜನರು ಪರದಾಡುವಂತಾಗಿದೆ. ನೂತನ ಗ್ರಾಮಕ್ಕೆ ಕುಡಿಯುವ ನೀರು ಮಾತ್ರ ಪೂರೈಕೆಯಾಗುತ್ತಿದ್ದು, ನಿತ್ಯ ಬಳಕೆಯ ನೀರಿಗಾಗಿ ಗ್ರಾಮಸ್ಥರು ಅಲೆದಾಡಬೇಕಿದೆ. ಮೂಲಸೌಲಭ್ಯಗಳು ಇಲ್ಲವಾದ್ದರಿಂದ ಈಗಲೂ ಸುಮಾರು 100 ಕುಟುಂಬಗಳು ಹಳೆ ಬಿದರಳ್ಳಿ ಗ್ರಾಮದಲ್ಲಿಯೇ ವಾಸಿಸುತ್ತಿದ್ದಾರೆ. ಸರ್ಕಾರ ಹಿಂದೆ ನೀಡಿದ್ದ ಪರಿಹಾರದ ಹಣವೆಲ್ಲ ಖರ್ಚಾಗಿದ್ದು, ಸರ್ಕಾರವೇ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ವಿಠಲಾಪುರ ಗ್ರಾಮವು ತುಂಗಭದ್ರಾ ನದಿಯಿಂದ ಸ್ವಲ್ಪ ದೂರದಲ್ಲಿದ್ದು, ಅದರ ಸ್ಥಳಾಂತರಕ್ಕೆ ಗ್ರಾಮದ ಹೊರವಲಯದಲ್ಲಿ ಮಾ.20, 2023ರಂದು 40 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ನೂತನ ವಿಠಲಾಪುರ ಗ್ರಾಮದ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗಲಿರುವ ಗ್ರಾಮಗಳ ಜತೆಗೆ ತುಂಗಭದ್ರಾ ನದಿ ಪ್ರವಾಹದಿಂದ ಪ್ರತಿ ವರ್ಷ ತಾಲ್ಲೂಕಿನ ಹಳೆಶಿಂಗಟಾಲೂರ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.
1962ರಲ್ಲಿ ತುಂಗಭದ್ರಾ ನದಿಗೆ ಮಹಾಪೂರ ಅಪ್ಪಳಿಸಿದ ಸಂದರ್ಭದಲ್ಲಿ ಶಿಂಗಟಾಲೂರ ಗ್ರಾಮವನ್ನು ಸ್ಥಳಾಂತರಿಸಲಾಯಿತು. ಹೊರವಲಯದಲ್ಲಿ ನೂತನ ಗ್ರಾಮ ನಿರ್ಮಿಸಲಾಯಿತು. ಈಗ ಭಾಗಶಃ ಹಳೆಶಿಂಗಟಾಲೂರ ಗ್ರಾಮಸ್ಥರು ನೂತನ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಹಳೆಶಿಂಗಟಾಲೂರ ಗ್ರಾಮದ ಕೆಲವು ಕುಟುಂಬಗಳಿಗೆ ಮನೆಗಳಿಲ್ಲದ್ದರಿಂದ ಅವರೆಲ್ಲ ಹಲವು ವರ್ಷಗಳಿಂದ ನೀರಾವರಿ ಇಲಾಖೆಯ ಕಟ್ಟಡಗಳಲ್ಲಿ ವಾಸಿಸುತ್ತಲಿದ್ದಾರೆ. ಹೊಸಶಿಂಗಟಾಲೂರ ಗ್ರಾಮದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
1992ರಲ್ಲಿ ತುಂಗಭದ್ರಾ ನದಿಯಲ್ಲಿ ಪ್ರವಾಹ ಬಂತು. ಆಗ ತಾಲ್ಲೂಕಿನ ಹಳೆಹೆಸರೂರು ಗ್ರಾಮದ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಯಿತು. ಭಾಗಶಃ ಹೆಸರೂರು ಗ್ರಾಮದ ಜನರು ನೂತನ ಗ್ರಾಮಕ್ಕೆ ಸ್ಥಳಾಂತಗೊಂಡಿದ್ದಾರೆ. ಕೆಲವು ಕುಟುಂಬಗಳು ಈಗಲೂ ಹಳೆಹೆಸರೂರು ಗ್ರಾಮದಲ್ಲಿ ವಾಸಿಸುತ್ತಲಿವೆ. ಆದರೆ ಇತ್ತೀಚೆಗೆ ನೂತನ ಹೆಸರೂರು ಗ್ರಾಮದಲ್ಲಿ ಗುರುತಿಸಿರುವ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಅದರ ಮೂಲ ಮಾಲೀಕ ಈಗ ಅನುಮತಿ ನೀಡುತ್ತಿಲ್ಲ ಎಂದು ಹೆಸರೂರು ಗ್ರಾಮದ ಕೆಲವು ಜನರು ದೂರಿದ್ದಾರೆ.
ನೂತನ ಹೆಸರೂರು ಗ್ರಾಮ ನಿರ್ಮಾಣಕ್ಕೆ ಖರೀದಿಸಿರುವ ಜಮೀನಿನ ಉತಾರಗಳಲ್ಲಿ ಈಗಲೂ ಹಳೆಯ ಮಾಲೀಕರ ಹೆಸರಿದ್ದು, ನೂತನವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಳು ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನೂತನ ಹೆಸರೂರು ಗ್ರಾಮದಲ್ಲಿಯೂ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಮೂಲಸೌಲಭ್ಯಗಳನ್ನು ಒದಗಿಸದೆ ನೀರಾವರಿ ಇಲಾಖೆಯವರು ಗ್ರಾಮಸ್ಥರನ್ನು ನೂತನ ಬಿದರಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ವಾಸಿಸುತ್ತಿರುವವರಿಗೆ ತುಂಬಾ ತೊಂದರೆಯಾಗಿದೆ. ಸರ್ಕಾರ ತಕ್ಷಣವೇ ನೂತನ ಬಿದರಳ್ಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕುನಾಗರಾಜ ಮತ್ತೂರು ಬಿದರಳ್ಳಿ ಗ್ರಾಮಸ್ಥ
ನೂತನ ಗುಮ್ಮಗೋಳ ಗ್ರಾಮದಲ್ಲಿ ಯಾವುದೇ ಸೌಲಭ್ಯಗಳಿಲ್ಲವಾದ್ದರಿಂದ ಗ್ರಾಮಸ್ಥರು ನೂತನ ಗ್ರಾಮಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ನೂತನ ಗ್ರಾಮವನ್ನು ಪುನರ್ ನಿರ್ಮಿಸಬೇಕುಹನುಮಂತ ಬೆಂಡಿಕಾಯಿ ಗುಮ್ಮಗೋಳ ಗ್ರಾಮಸ್ಥ
ಪ್ರವಾಹ ಪೀಡಿತ ಹಳೆಶಿಂಗಟಾಲೂರ ಗ್ರಾಮದ ಕೆಲವು ಕುಟುಂಬಗಳು ಹಲವು ವರ್ಷಗಳಿಂದ ಮನೆಗಳಿಲ್ಲದೆ ಸರ್ಕಾರಿ ಕಟ್ಟಡಗಳಲ್ಲಿ ವಾಸಿಸುತ್ತಿವೆ. ಅವರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಜನತಾ ದರ್ಶನ ಸೇರಿದಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಪ್ರವಾಹ ಪೀಡಿತರಿಗೆ ಮನೆಗಳು ಸಿಕ್ಕಿಲ್ಲಬಸವೇಶ್ವರಕುಮಾರ ಸದಾಶಿವಪ್ಪನವರ ಪ್ರವಾಹ ಪೀಡಿತ ಹಳೆಶಿಂಗಟಾಲೂರ ಗ್ರಾಮಸ್ಥ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.