ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಡನಹಳ್ಳಿ: 38 ಮಂಗಗಳ ಸಾವು

ಬೇರೆಡೆ ಕೊಂದು ಗ್ರಾಮದಲ್ಲಿ ಹಾಕಿರುವ ಶಂಕೆ
Last Updated 29 ಜುಲೈ 2021, 20:31 IST
ಅಕ್ಷರ ಗಾತ್ರ

ಬೇಲೂರು: ತಾಲ್ಲೂಕಿನ ಕುಶಾವರ ಗ್ರಾಮ ಪಂಚಾಯಿತಿಯ ಚೌಡನಹಳ್ಳಿಯಲ್ಲಿ ಬುಧವಾರ ರಾತ್ರಿ ಗೋಣಿಚೀಲದ ಮೂಟೆಯಲ್ಲಿ 38 ಮಂಗಗಳ ಮೃತದೇಹಗಳು ಕಂಡು ಬಂದಿವೆ. ಸ್ಥಳೀಯರು ಮೂಟೆಯನ್ನು ಬಿಚ್ಚಿದ್ದಾಗ ಜೀವಂತವಿದ್ದ 15 ಮಂಗಗಳು ಕೂಡಲೇ ಓಡಿ ಹೋದವು. ತೀವ್ರವಾಗಿ ಗಾಯಗೊಂಡಿದ್ದ ಮಂಗವೊಂದಕ್ಕೆ ಚಿಕಿತ್ಸೆ ನೀಡಲಾಗಿದೆ.

‘ಬುಧವಾರ ರಾತ್ರಿ 10.30ರ ವೇಳೆಯಲ್ಲಿ ಸ್ನೇಹಿತರೊಂದಿಗೆ ನಡೆದು ಹೋಗುವಾಗ ಗೋಣಿಚೀಲದ ಮೂಟೆಗಳನ್ನು ಗಮನಿಸಿ ಬಿಚ್ಚಿ ನೋಡಿದಾಗ ಮಂಗಗಳು ಕಂಡು ಬಂದವು. ಜೀವಂತವಾಗಿದ್ದ ಮಂಗಗಳು ಜೀವಭಯದಿಂದ ಓಡಿ ಹೋದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು’ ಎಂದು ಗ್ರಾಮದ ಆದೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಗರೆ ಅರಣ್ಯದಲ್ಲಿ ಮಂಗಗಳ ಅಂತ್ಯಸಂಸ್ಕಾರ ಮಾಡಿದೆವು. ಗಾಯಾಳು ಮಂಗವೊಂದಕ್ಕೆ ಚಿಕಿತ್ಸೆ ಕೊಡಿಸಿದೆವು. ಮರಣೋತ್ತರ ಪರೀಕ್ಷೆ ನಡೆಸಿ, ದೇಹದ ಅಂಗಾಂಗ ಮಾದರಿಯನ್ನು ಮೈಸೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ ತಿಳಿಸಿದರು.

‌‘ವಿಷಪ್ರಾಷನ ಅಥವಾ ಬಲವಾದ ಆಯುಧದಿಂದ ಹಲ್ಲೆ ನಡೆಸಿ ಮಂಗಗಳನ್ನು ಕೊಂದಿರಬಹುದು. ಪ್ರಯೋಗಾಲಯದ ವರದಿ ಬಂದ ಮೇಲಷ್ಟೇ ನಿಖರ ಕಾರಣ ಗೊತ್ತಾಗುತ್ತದೆ’ ಎಂದು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್ ತಿಳಿಸಿದರು. ‘ಪ್ರಕರಣದ ತನಿಖೆ ಪ್ರಾರಂಭಿಸಿದ್ದು, ತಪ್ಪಿತಸ್ಥರನ್ನು ಹುಡುಕಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಪಿಐ ಶ್ರೀಕಾಂತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT