ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ಯ ವೃತ್ತಿ ಮಾಡುವ ಶಿಕ್ಷಕರ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳ ಶಿಕ್ಷಕರ ವಿರುದ್ಧ ವ್ಯಾಪಕ ದೂರು: ಸಚಿವ ಮಧು ಬಂಗಾರಪ್ಪ
Published 28 ನವೆಂಬರ್ 2023, 14:50 IST
Last Updated 28 ನವೆಂಬರ್ 2023, 14:50 IST
ಅಕ್ಷರ ಗಾತ್ರ

ಹಾಸನ: ಶಿಕ್ಷಕರು ತಮ್ಮ ವೃತ್ತಿಗೆ ವಿರುದ್ಧವಾಗಿ ಇತರೆ ಖಾಸಗಿ ಕೆಲಸಗಳಲ್ಲಿ ನಿರತರಾಗಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದು, ಅಂತಹ ಶಿಕ್ಷಕರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೆಲವು ಶಿಕ್ಷಕರು ಶಾಲೆಗಳಿಗೆ ಸರಿಯಾಗಿ ಹೋಗುತ್ತಿಲ್ಲ. ಬಡ್ಡಿ ದಂಧೆ, ರಾಜಕೀಯ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ನಿರತರಾಗಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಸಂಬಂಧ ಪರಿಶೀಲನೆ ನಡೆಸಲು ಅಧಿಕಾರಿಗಳ ನಿಯೋಜನೆ ಸೇರಿದಂತೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದ್ದು, ಅಂತಹ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸ್ವರೂಪ್ ಪ್ರಕಾಶ್ ಹಾಗೂ ಎಚ್. ಕೆ. ಸುರೇಶ್, ಈ ರೀತಿಯ ನಡವಳಿಕೆ ಇರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಿವಲಿಂಗೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೋಷಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಿದೆ. ಸರ್ಕಾರ ಕೂಡಲೇ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಬೇಕು. ನನ್ನ ಕ್ಷೇತ್ರದಲ್ಲಿ 50 ಎಕರೆ ಭೂಮಿ ಒದಗಿಸುತ್ತೇನೆ. ಇಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣವನ್ನು ಒದಗಿಸಿದರೆ, ಹೆಚ್ಚಿನ ಮಕ್ಕಳು ಖಾಸಗಿ ಶಾಲೆಗಳತ್ತ ಹೋಗುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು .

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ‘ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅಧಿಕಾರಕ್ಕೆ ಬಂದು ಕೆಲವೇ ತಿಂಗಳು ಆಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಕೆಪಿಎಸ್ ಶಾಲೆ ತೆರೆಯುವ ಹಾಗೂ ಶಿಕ್ಷಕರಿಗೆ ಇಂಗ್ಲಿಷ್ ಭಾಷೆ ತರಬೇತಿ ನೀಡುವ ಬಗ್ಗೆ ಚಿಂತನೆ ಇದೆ’ ಎಂದರು.

‘ಕೆಲ ಶಿಕ್ಷಕರು ಶಾಲೆಗೆ ಹೋಗುವುದೇ ಇಲ್ಲ. ಇನ್ನು ಶಾಲೆಗೆ ಹಾಜರಾದರೆ ನಿದ್ದೆ ಮಾಡುತ್ತಿರುತ್ತಾರೆ. ರಾಜಕೀಯ ಮಾಡುವ ಶಿಕ್ಷಕರೇ ಹೆಚ್ಚಿದ್ದಾರೆ’ ಎಂದು ಶಾಸಕ ಸ್ವರೂಪ ಪ್ರಕಾಶ್ ತಿಳಿಸಿದರು.

ಡಿಡಿಪಿಐ ಜವರೇಗೌಡ ಸಹ, ‘ಕೆಲ ಶಿಕ್ಷಕರ ನಿರಾಸಕ್ತಿಯು ಮಕ್ಕಳ ದಾಖಲಾತಿ ಕುಸಿಯಲು ಕಾರಣವಾಗಿದೆ. ಸಮಯಕ್ಕೆ ಸರಿಯಾಗಿ ಪೋಷಕರ ಸಭೆ ಮಾಡದೇ ಇರುವುದು ಕಂಡುಬಂದಿದೆ. ಹಾಜರಾತಿ ಕಡಿಮೆಯಾಗುವುದರ ಜೊತೆಗೆ ಶೂನ್ಯ ಹಾಜರಾತಿ ಶಾಲೆಗಳು ಹೆಚ್ಚುತ್ತಿವೆ. ಇತ್ತೀಚೆಗೆ ಆರು ಶೂನ್ಯ ಶಾಲೆಗಳನ್ನು ಮರು ತೆರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಶಾಲೆಗಳಿಗೆ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್‌ಗಳ ವಿತರಣೆಯಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT