ಹಾಸನ: ತನ್ನ ತಮ್ಮನನ್ನು ವಿವಾಹವಾಗಲು ಒಪ್ಪದ ಇಬ್ಬರು ಯುವತಿಯರಿಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಯವತಿಯರ ಮಾವ ನಾಗರಾಜ್ ಹಾಗೂ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚಾವು ಗ್ರಾಮದಲ್ಲಿ ಸೋಮವಾರ ಹಲ್ಲೆ ನಡೆದಿತ್ತು. ಯೋಗಿತಾ (22) ಮತ್ತು ಪುಷ್ಟಿತಾ ತೀವ್ರವಾಗಿ ಗಾಯಗೊಂಡಿದ್ದು ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಬ್ಬರು ಯುವತಿಯರ ತಂದೆ ಇತ್ತೀಚೆಗೆ ನಿಧನರಾಗಿದ್ದರು. ಮನೆಯಲ್ಲಿ ಶುಭ ಕಾರ್ಯ ಮಾಡಬೇಕೆಂದು ಸೋದರ ಮಾವನ ಮನೆಗೆ ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿ ಹೋಬಳಿ ದೊಡ್ಡಕಾರಳ್ಳಿ ಗ್ರಾಮದ ನಾಗರಾಜ್ ತನ್ನ ತಾಯಿ ಹಾಗೂ ಅಜ್ಜಿ ಜತೆಗೆ ಬಂದು ಬಂದು ತಮ್ಮನ ಮದುವೆಯ ಪ್ರಸ್ತಾಪ ಮಾಡಿದ್ದಾನೆ.
‘ಮನೆಯ ಹಿರಿಯ ಮಗಳಾದ ನನ್ನ ಮೇಲೆ ಸಂಸಾರದ ಜವಾಬ್ದಾರಿ ಇದೆ. ಸದ್ಯಕ್ಕೆ ನಾನು ಮದುವೆಯಾಗುವುದಿಲ್ಲ. ತಂಗಿಯನ್ನು ಚೆನ್ನಾಗಿ ಓದಿಸಬೇಕು. ಅಲ್ಲದೆ ಬಿಎಸ್ಸಿ ಓದಿರುವ ನಾನು ನಿನ್ನ ತಮ್ಮನನ್ನು ಮದುವೆ ಆಗುವುದಿಲ್ಲ’ ಎಂದು ಯೋಗಿತಾ ವಿವಾಹ ನಿರಾಕರಿಸಿದ್ದಾಳೆ.
ಅಕ್ಕ ತಂಗಿ ಇಬ್ಬರೂ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣ ಕೋಪಗೊಂಡ ನಾಗರಾಜ್, ಯುವತಿಯರಿಬ್ಬರ ಕೊಲೆಗೆ ಯತ್ನಿಸಿದ್ದಾನೆ. ಹಲ್ಲೆ ಮಾಡಿದ ನಾಗರಾಜ್, ಕುಮ್ಮಕ್ಕು ನೀಡಿದ ಆರೋಪದಲ್ಲಿ ನಾಜರಾಜ್ನ ಅಜ್ಜಿ ಪುಟ್ಟಮ್ಮ, ತಾಯಿ ಅಕ್ಕಮ್ಮ ಅವರನ್ನು ಬಂಧಿಸಲಾಗಿದೆ.