ಬೇಲೂರು: ‘ದೇಶಭಕ್ತ ಮತ್ತು ದೇಶದ್ರೋಹಿ ಸಂಘಟನೆಗಳ ನಡುವೆ ಹೋಲಿಕೆ ಮಾಡುವುದು ಅಕ್ಷಮ್ಯ ಅಪರಾಧ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ದಸರಾ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಬುಧವಾರ ರಾತ್ರಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆರ್ಎಸ್ಎಸ್ ಒಂದು ದೇಶ ಭಕ್ತ ಸಂಘಟನೆ. ದೇಶ ಕಟ್ಟುವ ಕಾರ್ಯ ಭಾರತದ ಉದ್ದಕ್ಕೂ ಆಗಬೇಕೆಂದು ಬಯಸುತ್ತದೆ. ಭಾರತ ಭಾರತವಾಗಿ ಉಳಿಯಬೇಕೆಂದು ಬಯಸುವುದು ಆರ್ಎಸ್ಎಸ್’ ಎಂದರು.
‘ಭಾರತವನ್ನು ಮೊಘಲಸ್ತಾನ್ ಮಾಡಿ, ಹಿಂದುಗಳನ್ನೆಲ್ಲ ಸರ್ವನಾಶ ಮಾಡಬೇಕೆಂದು ಬಯಸುವುದು ಪಿಎಫ್ಐ. ಇಂತಹ ಸಂಘಟನೆಗಳ ಮಧ್ಯೆ ಹೋಲಿಕೆ ಮಾಡುವವರಿಗೆ ಏನು ಹೇಳಬೇಕು?, ಯಾರಾದರೂ ತಲೆ ಸರಿ ಇದ್ದವರು ಹೋಲಿಕೆ ಮಾಡುತ್ತಾರಾ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
‘ಆರ್ಎಸ್ಎಸ್ಗೆ ಬೈದರೆ ಓಟು ಸಿಗುತ್ತದೆ ಎನ್ನುವ ದುರಾಸೆ. ಇವರಿಗೂ, ಪಿಎಫ್ಐಗೂ ವ್ಯತ್ಯಾಸ ಏನು? ಪಿಎಫ್ಐಗೂ ಆರ್ಎಸ್ಎಸ್ ಗುರಿ. ಕಾಂಗ್ರೆಸ್ನವರು ಆರ್ಎಸ್ಎಸ್ ಅನ್ನೇ ಗುರಿ ಮಾಡುತ್ತಾರೆ. ಹಾಗಾದರೆ ಇವರಿಬ್ಬರಿಗೂ ಒಳ ಹೊಂದಾಣಿಕೆ ಇರುವ ಅನುಮಾನ ಬರುತ್ತದೆ. ಮೊಘಲಸ್ತಾನ್ ಮಾಡಲು ನೀವು ನಮಗೆ ಸಹಾಯ ಮಾಡಿ. ನಿಮಗೆ ನಾವು ಓಟು ಹಾಕ್ತಿವಿ ಅಂತ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಇವತ್ತಿನ ಕಾಂಗ್ರೆಸ್, ಪಿಎಫ್ಐ ಜೊತೆಗೆ ಕೈ ಜೋಡಿಸಿದ್ದಾರೆಯೇ ಅನುಮಾನ ನನಗೆ ಬರುತ್ತಿದೆ’ ಎಂದರು.
‘ಕಾಂಗ್ರೆಸ್ನವರು ಈಗಾಗಲೇ ಒಂದು ವಿಭಜನೆ ಮಾಡಿದ್ದಾರೆ. ಇನ್ನೊಂದು ವಿಭಜನೆಗೆ ತಡೆಗೋಡೆ ಆಗಿರುವುದು ಆರ್ಎಸ್ಎಸ್. ಅದನ್ನು ಮುಗಿಸಿದರೆ ಅವರು ಮೊಘಲಸ್ತಾನ್ ಮಾಡುವುದು ಬಹಳ ಸುಲಭ. ಸಿದ್ದರಾಮಯ್ಯನವರೇ ನೀವು ಸುನ್ನಿ ಮಾಡಿಸಿಕೊಳ್ಳಲು ಸಿದ್ಧರಿದ್ದೀರಾ’ ಎಂದು ಪ್ರಶ್ನಿಸಿದ ಅವರು, ‘ಬಹುಶಃ ಸಿದ್ದರಾಮಯ್ಯ ಅವರು ಓಟು ಸಿಗುತ್ತದೆ ಎಂದು ಸಿದ್ಧರಾಗಿ ಇರಬಹುದು. ಆದರೆ, ನಾನಂತೂ ತಯಾರಿಲ್ಲ’ ಎಂದರು.
‘ಇದು ದಸರೆ, ಆ ತಾಯಿ ವರವನ್ನು ಕೊಡುತ್ತಾಳೆ. ಹಾಗೆಯೇ ದುಷ್ಟರ ನಿಗ್ರಹವನ್ನೂ ಮಾಡುತ್ತಾಳೆ. ಆಕೆಯ ಬಳಿ ಶಸ್ತ್ರವೂ ಇದೆ, ಶಾಸ್ತ್ರವೂ ಇದೆ. ಯಾರೂ ಶಾಸ್ತ್ರದ ಮೂಲಕ ಸಂಧಾನಕ್ಕೆ ಬರುತ್ತಾರೋ ಅವರೊಂದಿಗೆ ಸಂಧಾನ, ಯಾರೂ ಶಸ್ತ್ರದ ಮೂಲಕ ಬರುತ್ತಾರೋ ಅವರ ಸಂಹಾರ ಮಾಡುತ್ತಾಳೆ’ ಎಂದರು.