ಹಾಸನ: ರಾಜ್ಯ ಸರ್ಕಾರ 5 ಮತ್ತು 8ನೇ ತರಗತಿಗಳಿಗೆ ಮಾರ್ಚ್ನಲ್ಲಿ ನಡೆಸಲು ಉದ್ದೇಶಿಸಿರುವ ಪಬ್ಲಿಕ್ ಪರೀಕ್ಷೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಬೇಕು ಎಂದು ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಈ. ಶಿವರಾಮೇಗೌಡ ಆಗ್ರಹಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಡಿಸೆಂಬರ್ನಲ್ಲಿ ಈ ಬಗ್ಗೆ ಸೂಚನೆ ನೀಡಿದ್ದು, ಮಕ್ಕಳು ಮಾನಸಿಕವಾಗಿ ತಯಾರಿರುವುದಿಲ್ಲ. ಈಗಾಗಲೇ ಮಕ್ಕಳ ಪೋಷಕರು ಶಾಲೆಗೆ ನಿತ್ಯ ಬಂದು ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಸರ್ಕಾರಿ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದ್ದು, ಪ್ರಸ್ತುತ ಆದೇಶವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗುವಂತೆ ಮಾಡಬೇಕಿದೆ ಎಂದರು.
ರಾಜ್ಯಸಭಾ ಮಾಜಿ ಸದಸ್ಯ, ಒಕ್ಕೂಟದ ಕಾನೂನು ಸಲಹೆಗಾರ ಎಚ್.ಕೆ. ಜವರೇಗೌಡ ಮಾತನಾಡಿ, ಸರ್ಕಾರ ಅನೇಕ ಅವೈಜ್ಞಾನಿಕ ನೀತಿಗಳನ್ನು ರಾಜ್ಯದಲ್ಲಿ ಜಾರಿಗೆ ತರುತ್ತಿದೆ. ಈಗಾಗಾಲೇ ಸರ್ಕಾರದ ಕೆಲವು ಅವೈಜ್ಞಾನಿಕ ನೀತಿಗೆ ಕೋರ್ಟ್ ಛೀಮಾರಿ ಹಾಕಿರುವುದನ್ನು ಮನಗಾಣಬೇಕು. ಹಾಗಾಗಿ ಸರ್ಕಾರ ಈ ನೀತಿಯ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಸರ್ಕಾರ ಅನುದಾನ ರಹಿತ ಶಾಲೆಗಳಿಂದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಗೆ ಖಾಸಗಿ ಶಾಲೆಗಳಿಂದ ಅನುದಾನ ಪಡೆಯುತ್ತಿದೆ. ಆದರೆ ಆ ಅನುದಾನದಲ್ಲಿ ನಮ್ಮ ಶಿಕ್ಷಕರಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಹಾಗೆಯೇ ವಿದ್ಯಾರ್ಥಿಗಳಿಗೂ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ. ಈ ಅನುದಾನದಲ್ಲಿ ನಮ್ಮ ಖಾಸಗಿ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೌಲಭ್ಯ ಒದಗುವಂತಾಗಬೇಕು ಎಂದರು.
ಒಕ್ಕೂಟದ ಗೌರವಾಧ್ಯಕ್ಷ ಡಾ.ಎಚ್.ಎಸ್. ಅನಿಲ್ ಕುಮಾರ್, ಉಪಾಧ್ಯಕ್ಷೆ ತಾರಾ ಎಸ್. ಸ್ವಾಮಿ, ಸಕಲೇಶಪುರ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಮಲ್ನಾಡ್ ಜಾಕೀರ್, ಸದಸ್ಯರಾದ ಡಾ.ಭಾರತಿ, ಮಮತಾ ನವೀನ್, ಎಚ್.ಡಿ. ಕುಮಾರ್, ರಂಗೇಗೌಡ, ಆನಂತ ಕುಮಾರ್, ಪ್ರಕಾಶ್, ಸದಾಶಿವಯ್ಯ, ಶೋಭಾ ಹಾಜರಿದ್ದರು.