ಹಾಸನ: ಧಾರಾಕಾರ ಮಳೆಗೆ ಸಕಲೇಶಪುರ ತಾಲ್ಲೂಕು ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾನೆಕೆರೆ (ಬೇಡರಜಗ್ಲಿ) ಗ್ರಾಮದ ಶಿವಣ್ಣ ಅವರ ದನದ ಕೊಟ್ಟಿಗೆ ಕುಸಿದು ಬಿದ್ದಿದ್ದು, ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿವೆ.
ಶನಿವಾರ ಬೆಳಿಗ್ಗೆ 6.30ರ ಸಮಯದಲ್ಲಿ ಮಣ್ಣಿನ ಕೊಟ್ಟಿಗೆ ಕುಸಿದು ಬಿದ್ದ ಶಬ್ಧ ಕೇಳುತ್ತಿದ್ದಂತೆ ಮನೆಯಿಂದ ಹೊರಗೆ ಬಂದು ನೋಡಿದ್ದಾರೆ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸು ಮತ್ತು ಕರು ಸಿಲುಕಿಕೊಂಡಿದ್ದವು. ತಕ್ಷಣವೇ ದನಗಳನ್ನು ಕಟ್ಟಿ ಹಾಕಿದ್ದ ಹಗ್ಗ ಕತ್ತರಿಸಿ ರಕ್ಷಿಸಲಾಯಿತು. ಹೆಂಚುಗಳು ಪುಡಿಯಾಗಿದ್ದು, ಗಳ ಮುರಿದು ಹೋಗಿದೆ.
‘ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಬರುತ್ತಿದ್ದು, ದನಗಳನ್ನು ಕಟ್ಟಿ ಹಾಕಲು ಸಮಸ್ಯೆ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಹೊಸ ಕೊಟ್ಟಿಗೆ ನಿರ್ಮಿಸಲು ಪರಿಹಾರ ನೀಡಬೇಕು’ ಎಂದು ಶಿವಣ್ಣ ಮನವಿ ಮಾಡಿದರು.