ಹೊಳೆನರಸೀಪುರ: ತಾಲ್ಲೂಕಿನ ಮಾಚಗೌಡನಹಳ್ಳಿ ಸಮೀಪದ ಮೂಡಲಕೊಪ್ಪಲು ಗ್ರಾಮದ ಸುತ್ತಮುತ್ತ ಅಕ್ರಮ ಕಲ್ಲುಗಣಿಗಾರಿಗೆ ನಡೆಯುತ್ತಿದೆ.
ಸ್ಫೋಟಕಗಳನ್ನು ಬಳಸಿ ಸಿಡಿಸಿ ಕಲ್ಲುಗಳ ಸಾಗಣೆಯಲ್ಲಿ ಗಾಣೆಯಲ್ಲಿ ತೊಡಗಿರುವುದರಿಂದ ಸುತ್ತಲಿನ ಗ್ರಾಮಸ್ಥರಿಗೆ ತೀವ್ರ ತೊಂದರೆ ಆಗಿದೆ.
ಮೂಡಲಕೊಪ್ಪಲು ಗ್ರಾಮದಿಂದ ಹರದನಹಳ್ಳಿ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆ ಆಗಿದ್ದಲ್ಲದೆ, ಕಲ್ಲಿನ ಪುಡಿ ಹಾರಿ ಬಿದ್ದು ಜಾನುವಾರುಗಳಿಗೆ ಮೇಯಲು ಹುಲ್ಲು, ಹಸಿರು ಸಿಗದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗೂಂಡಾ ವರ್ತನೆಯ ಕೆಲವರು ಈ ಅಕ್ರಮ ಕಲ್ಲು ಸಾಗಾಣಿಕೆಯಲ್ಲಿ ತೊಡಗಿದ್ದು ಅವರ ವಿರುದ್ಧ ಮಾತನಾಡಲು ಜನ ಭಯಪಡುತ್ತಿದ್ದಾರೆ.
ಇತ್ತೀಚೆಗೆ ಚಾಕೇನಹಳ್ಳಿ ಸ್ಫೋಟ ಘಟನೆಯಲ್ಲಿ ಮೂವರು ಸಾವನಪ್ಪಿದ್ದಾರೆ. ಮತ್ತೆ ಅಂಥದ್ದೇ ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಸಿಡಿಸಿ ಸಾಗಿಸುತ್ತಿರುವುದು ನಡೆದಿದೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಕ್ರಮ ಕಲ್ಲು ಸಾಗಾಣಿಕೆ ತಡೆಗಟ್ಟಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಘಟನೆಯ ಬಗ್ಗೆ ಗ್ರೇಡ್ 2 ತಹಶೀಲ್ದಾರ್ ರವಿ ಅವರ ಗಮನಕ್ಕೆ ತಂದಾಗ, ‘ಗ್ರಾಮಸ್ಥರು ಈ ಬಗ್ಗೆ ನನಗೆ ಮೌಕಿಕವಾಗಿ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿ, ಅವರ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.