ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಾರಸಮುದ್ರ ಕೆರೆ ಏರಿ ಬಿರುಕು: ಸಂಚಾರಕ್ಕೆ ತೊಡಕು

ನಿರ್ಬಂಧ ವಿಧಿಸಿದ್ದರೂ ವಾಹನಗಳ ಸಂಚಾರ ನಿರಾತಂಕ; ಕುಸಿತ ತಡೆಯಲು ಮರಳು ಚೀಲ ಜೋಡಣೆ
Last Updated 7 ಮಾರ್ಚ್ 2021, 16:53 IST
ಅಕ್ಷರ ಗಾತ್ರ

ಹಳೇಬೀಡು: ಇಲ್ಲಿನ ಐತಿಹಾಸಿಕ ದ್ವಾರಸಮುದ್ರ ಕೆರೆ ಏರಿಯಲ್ಲಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದರೂ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಕೆರೆ ಏರಿ ಮೇಲೆ ಸಂಚಾರ ನಿರ್ಬಂಧಿಸಿದ್ದರೂ ವಾಹನಗಳು ಸಂಚರಿಸುತ್ತಿವೆ.

ಹಾಸನ ಸೇರಿದಂತೆ ಹಲವು ಊರಿಗೆ ತೆರಳಲು ಜನರಿಗೆ ತೊಂದರೆ ತಪ್ಪಿದಲ್ಲ. ವಾಹನ ಸಂಚಾರ ನಿರ್ಬಂಧ ಇದ್ದರೂ ಪ್ರಯಾಸ ದಲ್ಲಿಯೇ ಏರಿ ಮೇಲೆ ವಾಹನಗಳು ಸಂಚರಿಸುತ್ತಿವೆ. ಏರಿಯ ಎರಡೂ ಬದಿ ನಾಮಫಲಕ ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಆದರೂ ವಾಹನ ಚಾಲಕರು ಗೋಡೆಯ ಒಂದು ಮಗ್ಗುಲಿನಲ್ಲಿ ಜಾಗ ಮಾಡಿಕೊಂಡು ಹೋಗುತ್ತಿದ್ದಾರೆ.

ದ್ವಿಚಕ್ರ ವಾಹನ, ಆಟೊ ರಿಕ್ಷಾ ಮಾತ್ರವಲ್ಲದೆ ಮ್ಯಾಕ್ಸಿಕ್ಯಾಬ್ ಸಹ ಕುಸಿಯುತ್ತಿರುವ ಏರಿಯ ಮೇಲೆಯೇ ಸಂಚರಿಸುತ್ತಿವೆ. ಅಲ್ಲದೇ ಎರಡೂ ಬದಿಯಲ್ಲಿ ಗಿಡಗಂಟಿ ಬೆಳೆದಿದ್ದು, ವಾಹನಸಂಚಾರಕ್ಕೆ ಸ್ಥಳಾವಕಾಶ ಕಡಿಮೆ ಆಗಿದೆ. ಏರಿ ರಸ್ತೆ ಹದಗೆಟ್ಟಿದ್ದು, ಹಲವು ಕಡೆ ಡಾಂಬರು ಕಿತ್ತು ಬಂದಿದೆ.

ಸಚಿವರಾದ ಕೆ.ಗೋಪಾಲಯ್ಯ, ಮಾಧುಸ್ವಾಮಿ, ಸಿ.ಪಿ.ಯೋಗೇಶ್ವರ್ ಹಾಗೂ ಅಧಿಕಾರಿಗಳು ಪ್ರತ್ಯೇಕವಾಗಿ ಏರಿ ವೀಕ್ಷಿಸಿ, ಕೊಟ್ಟ ಭರವಸೆಗಳು ಈಡೇರಲಿಲ್ಲ. ವರ್ಷದ ಹಿಂದೆ ಬಿರುಕು ಕಾಣಿಸಿಕೊಂಡಿದ್ದ ಕೆರೆ ಏರಿ ನಾಲ್ಕು ತಿಂಗಳಿನಿಂದ ಕುಸಿಯುತ್ತಲೇ ಇದೆ. ಹಳೇಬೀಡು ವೀಕ್ಷಿಸಲು ಬರುವ ಪ್ರವಾಸಿಗರು ಸಹ ಕೆರೆ ಏರಿ ರಸ್ತೆ ಮೂಲಕವೇ ಬರಬೇಕಿದೆ. ಹಳ್ಳಿಗಳ ರೈತರು ಕೃಷಿ ಉತ್ಪನ್ನಗಳನ್ನು ಕೆರೆ ಏರಿ ಮೇಲೆಯೇ ಸಾಗಣೆ ಮಾಡಬೇಕಿದೆ.

ಅನಾಹುತ ತಪ್ಪಿಸಲು ಏರಿ ಪಕ್ಕದಲ್ಲಿ ಮರಳು ಚೀಲ ಹಾಕಲಾಗಿದೆ. ಆದರೆ ಏರಿ ದುರಸ್ತಿ ಮಾಡುವ ಕೆಲಸ ಮಾತ್ರ ಕಾರ್ಯ ಆರಂಭವಾಗಲೇ ಇಲ್ಲ. ಹೀಗಾಗಿ ಕೆರೆ ಏರಿಯ ಮೇಲೆ ಜಮೀನುಗಳಿಗೆ ತೆರಳುವ ರೈತರು ಹಾಗೂ 20ಕ್ಕೂ ಹೆಚ್ಚು ಹಳ್ಳಿಯ ಜನರಿಗೆ ತೊಂದರೆ ಆಗಿದೆ. ದ್ವಾರಸಮುದ್ರ ಕೆರೆ 100 ಹೆಕ್ಟೇರ್‌ ಜಲಾವೃತ ಪ್ರದೇಶ ಹೊಂದಿದೆ. 289 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿರುವ ಕೆರೆ 153.80 ಎಂಸಿಎಫ್‌ಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

‘ಸಾರಿಗೆ ಬಸ್‌ಗಳು‌ ದೂರದ ಮಾರ್ಗವಾದ ಮಲ್ಲಾಪುರ- ಕ್ಯಾತನಕೆರೆ ಗಡಿ ರಸ್ತೆ ಮುಖಾಂತರ ಹಾಸನಕ್ಕೆ ಸಂಚರಿಸುತ್ತಿದ್ದವು. ಎರಡು ದಿನದಿಂದ ಕುಸಿದಿರುವ ಕೆರೆ ಏರಿಯ ಮೇಲೆ ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ’ ಎಂದು ವರ್ತಕ ಶಿವಮೂರ್ತಿ ಆತಂಕ ವ್ಯಕ್ತಪಡಿಸಿದರು.

‘ಏರಿ ದುರಸ್ತಿಗಾಗಿ ಭರ್ತಿಯಾಗಿದ್ದ ಕೆರೆಯ ನೀರನ್ನು ಹೊರ ಬಿಡಲಾಯಿತು. 14 ವರ್ಷದ ನಂತರ ಅಪರೂಪಕ್ಕೆ ಭರ್ತಿಯಾದ ಕೆರೆಯಲ್ಲಿ ಶೇಕಡಾ 25 ರಷು ನೀರು ಹೊರ ಹೋಗಿದೆ.ಮಣ್ಣು ಕುಸಿದು ಸಡಿಲವಾಗಿರುವುದರಿಂದ ಏರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರುಜಿನುಗುತ್ತಿದೆ’ ಎಂದು ರೈತ ಎಚ್.ಎಸ್.ಆನಂದ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT