ಹಾಸನ: ‘ಶ್ರೀರಾಮನ ಭಕ್ತನಾಗಿ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲು ಬಂದಿದ್ದೇನೆ ಹೊರತು ಸಚಿವನಾಗಿ ಅಲ್ಲ, ಆದರ್ಶ ಪುರುಷನಿಗಾಗಿ ಈ ಸೇವೆಯಲ್ಲಿ ಪಾಲ್ಗೊಳ್ಳಲು ಖುಷಿಯಿದೆ’ ಎಂದು ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.
ನಗರದ ಬೀರನಹಳ್ಳಿ ಕೆರೆ ಬಡಾವಣೆ, ಕೆ.ಆರ್. ಪುರಂ ಹಾಗೂ ಸಿದ್ದಯ್ಯ ನಗರದಲ್ಲಿ ಮಂಗಳವಾರ ಸಂಜೆ ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ರಾಮ ಮಂದಿರಕ್ಕಾಗಿ ಸಾವಿರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಹಲವಾರು ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿ ದಾರಿ ಸುಗಮಗೊಳಿಸಿದೆ. ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾಧು ಸಂತರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ’ ಎಂದರು.
‘ಉತ್ತರ ಪ್ರದೇಶ ಸರ್ಕಾರ ಒಂದೇ ದೇವಾಸ್ಥಾನ ನಿರ್ಮಾಣ ಮಾಡುವ ಶಕ್ತಿ ಹೊಂದಿದೆ. ಆದರೆ ದೇಶದ 130 ಕೋಟಿ ಜನರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕು ಎಂಬ ಉದ್ದೇಶದಿಂದ ಮನೆ ಮನೆಗೆ ಭೇಟಿ ನೀಡುತ್ತಿದ್ದೇವೆ. ಇಷ್ಟೇ ಹಣ ನೀಡಬೇಕೆಂದು ಯಾರನ್ನೂ ಬಲವಂತಪಡಿಸಿಲ್ಲ’ ಎಂದು ಸ್ಪಷ್ಟ ಪಡಿಸಿದರು.
ನೂತನ ಕೃಷಿ ಕಾಯ್ದೆಯಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ರಾಜಕೀಯ ಉದ್ದೇಶದಿಂದ ಚಳವಳಿ ನಡೆಸುತ್ತಿದೆ ಎಂದರು.
ಶಾಸಕ ಪ್ರೀತಂ ಜೆ.ಗೌಡ, ಹುಡಾ ಅಧ್ಯಕ್ಷ ಲಲಾಟಮೂರ್ತಿ, ಆರ್ಎಸ್ಎಸ್ ವಿಭಾಗೀಯ ಕಾರ್ಯವಾಹ ವಿಜಯಕುಮಾರ್ ನಾರ್ವೆ, ಪಾರಸ್ಮಲ್, ಎಸ್.ಕೆ. ವೇಣುಗೋಪಾಲ್, ನವೀನ್, ಕಾರ್ತಿಕ್, ವಿಜಯ್ ಹಾಗೂ ಇತರರು ಇದ್ದರು.